ಸವಣೂರು : ಮಸೀದಿಯ ದೀಪವನ್ನು ಬೆಳಗಿಸಿ ಮಸೀದಿಯ ಗೌರವಕ್ಕೆ ಧಕ್ಕೆ ತಂದ ಘಟನೆ ಸವಣೂರಿನಲ್ಲಿ ನಡೆದಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಸವಣೂರಿನ ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯುದ್ದೀನ್ ಜುಮಾ ಮಸೀದಿಗೆ ಪ್ರವೇಶಿಸಿ ಮಸೀದಿಯ ಮುಂಭಾಗದಲ್ಲಿರುವ ದೀಪವನ್ನು ಬೆಳಗಿಸಿ, ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಅದರ ಫೋಟೋ ದುರ್ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಇಬ್ಬರು ಕಿಡಿಗೇಡಿಗಳ ವಿರುದ್ಧ ಜಮಾಅತ್ ಕಮಿಟಿ ಅಧ್ಯಕ್ಷ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಮಸೀದಿಯಲ್ಲಿ ವಿದ್ಯುತ್ ದೀಪ ಬರುವ ಮೊದಲು ದೀಪದ ಬೆಳಕಿನಲ್ಲಿ ನಮಾಜ್ ಮಾಡುತ್ತಿದ್ದು, ಅಂದಿನಿ0ದ ನಡೆದುಕೊಂಡು ಬಂದ ಪದ್ಧತಿ ಇದಾಗಿದೆ. ಆದರೆ ಹೊತ್ತಲ್ಲದ ಹೊತ್ತಿನಲ್ಲಿ ಮಸೀದಿಗೆ ಪ್ರವೇಶಿಸಿದ ಚೆನ್ನಾವರ ಜಮಾಅತಿಗೊಳಪಟ್ಟ ಇಬ್ಬರು ಮುಸ್ಸಂಜೆಯ ವೇಳೆ ಯಾರೂ ಮಸೀದಿಯಲ್ಲಿ ಇಲ್ಲದ ಸಮಯದಲ್ಲಿ ಬಂದು ದೀಪವನ್ನು ಬೆಳೆಗಿಸಿದ್ದಾರೆ.
ಬಳಿಕ ಅದರ ಫೋಟೋ ತೆಗೆದು ಮಸೀದಿಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಕಿಡಿಗೇಡಿಗಳು ಈ ದೀಪವನ್ನು ಬೆಳಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದ್ದು, ಪೋಲಿಸರು ದೂರು ದಾಖಲಿಸಿಕೊಂಡಿದ್ದಾರೆ.