ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಯುವಕನೋರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮಡಿಕೇರಿ ನಗರದ ಕೂರ್ಗ್ ಕುಸಿನ್ ಹೊಟೇಲ್ ಮಾಲಕ ಕಣ್ಣಚಂಡ ಗಿರೀಶ್ ಪೆಮ್ಮಯ್ಯ ಹಾಗೂ ಪುಷ್ಪ ದಂಪತಿಯ ಪುತ್ರ ಸ್ವರೂಪ್ ಅಯ್ಯಪ್ಪ(24) ಮೃತಪಟ್ಟವರು.
ಕಳೆದ ಕೆಲವು ದಿನಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬೆಂಗಳೂರು ಆಸ್ಪತ್ರೆಯಲ್ಲಿದ್ದ ಸ್ವರೂಪ್ ಅಯ್ಯಪ್ಪರ ಮಿದುಳು ನಿಷ್ಕ್ರಿಯಗೊಂಡಿತ್ತು ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಮೃತರ ಪೋಷಕರು ದುಃಖದ ನಡುವೆಯೂ ತಮ್ಮ ಪುತ್ರನ ಅಂಗಾಗ ದಾನ ಮಾಡಿದ್ದಾರೆ.ಸ್ವರೂಪ್ ಅಯ್ಯಪ್ಪ ಹಾಗೂ ಸಹೋದರ ಸುಬ್ಬಯ್ಯ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಸಹೋದರ ಸುಬ್ಬಯ್ಯನನ್ನು ಕರೆದುಕೊಂಡು ಬರಲು ಸ್ನೇಹಿತನ ಕಾರಿನಲ್ಲಿ ತೆರಳುತ್ತಿದ್ದಾಗ ಬಾಣಸವಾಡಿ ರಿಂಗ್ ರಸ್ತೆಯ ಸಮೀಪ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಸ್ವರೂಪ್ ರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸಹೋದರ ಸುಬ್ಬಯ್ಯ ಹಾಗೂ ಸ್ನೇಹಿತರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬೆಂಗಳೂರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.