ಧರ್ಮದರ್ಶಿಯಾದ ಡಾ. ವೀರೇಂದ್ರ ಹೆಗ್ಗಡೆಯವರು ಬಣ್ಣದ ಲೋಕದಲ್ಲಿ ಕಾಣಿಸಿಕೂಳ್ಳಲಿದ್ದಾರೆ. ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ವೀರ ಕಂಬಳ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ತುಳುನಾಡಿನ ಹೆಮ್ಮೆಯ ಕಂಬಳ ಸ್ಪರ್ಧೆಯನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಹಾಗೂ ತುಳು ಭಾಷೆಗಳಲ್ಲಿ ವೀರ ಕಂಬಳ ಸಿನಿಮಾ ತೆರೆಗೆ ಬರಲಿದೆ. ಇನ್ನೂ ತುಳು ಭಾಷೆಯಲ್ಲಿ ಬಿರ್ದದ ಕಂಬಳ ಹೆಸರಿನಲ್ಲಿ ಸಿನಿಮಾ ಮೂಡಿ ಬರ್ತಿದೆ. 7 ವರ್ಷಗಳ ಕಾಲ ಸಂಶೋಧನೆ ನಡೆಸಿ ಸಿನಿಮಾದ ಕಥೆ, ಚಿತ್ರಕಥೆ ಹೆಣೆಯಲಾಗಿದೆ.
“ವೀರ ಕಂಬಳ” ಸಿನಿಮಾಕ್ಕೆ ಅರುಣ್ ರೈ ತೋಡಾ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಬಣ್ಣ ಹಚ್ಚಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಅವರು ಮೇಕಪ್ ಹಾಕಿಕೊಳ್ಳುತ್ತಿರುವ ಫೋಟೊ ವೈರಲ್ ಆಗುತ್ತಿದೆ. ತುಳುನಾಡಿನ ಪ್ರಸಿದ್ಧ ರಂಗಭೂಮಿ ಕಲಾವಿದರ ಜೊತೆಗೆ ಪ್ರಕಾಶ್ ರಾಜ್, ಆರ್ಮುಗ ರವಿಶಂಕರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.