ಬಡ ಜನರ ಬಾಳಿಗೆ ಬೆಳಕಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿ ಶ್ರೀವತ್ಸರವರ ಬಗ್ಗೆ ಗ್ರಾಮಸ್ಥರಿಂದ ಶ್ಲಾಘನೆ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿ ಶ್ರೀವತ್ಸ ಎಂಬವರ ಸತತ ಪ್ರಯತ್ನದಿಂದ ಬಸವ ವಸತಿ ಯೋಜನೆಯಡಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆಯಡಿಯಲ್ಲಿ ನೂರು ಬಡಕುಟುಂಬಗಳಿಗೆ ಸರಕಾರದ ವತಿಯಿಂದ ಮನೆ ನಿರ್ಮಾಣ ವ್ಯವಸ್ಥೆ ಕಲ್ಪಿಸಿಲಾಗಿದೆ.
ಮೂಲತಃ ತೀರ್ಥಹಳ್ಳಿಯವರಾದ ಶ್ರೀವತ್ಸರವರು ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿದ್ದು, ಕಳೆದ ಬಾರಿಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೊಸ ಸಮಿತಿಯಲ್ಲಿ ಟ್ರಸ್ಟಿಯಾಗಿ ಆಯ್ಕೆಯಾಗಿದ್ದರು. ಅಂದಿನಿಂದ ನಿರಂತರ ಸಮಾಜ ಸೇವೆಯ ಜೊತೆಗೆ ಸುಬ್ರಹ್ಮಣ್ಯ ಗ್ರಾಮದ ಅಭಿವೃದ್ಧಿ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶ್ರೀವತ್ಸರವರು ಅವಧೂತ್ ವಿನಯ್ ಗುರೂಜಿಯವರ ಪರಮ ಭಕ್ತರಾಗಿದ್ದು, ಅವರ ಆಪ್ತ ಕಾರ್ಯದರ್ಶಿಯಾಗಿ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಸುಬ್ರಹ್ಮಣ್ಯ ಗ್ರಾಮದಲ್ಲಿ ಬಡ ಕುಟುಂಬಗಳು ಸ್ವಂತ ಮನೆ ನಿರ್ಮಾಣಕ್ಕಾ ಆರ್ಥಿಕ ಸಹಾಯ ಕೋರಿದ್ದು, ಈ ಬಗ್ಗೆ ಶ್ರೀವತ್ಸರವರು ಅವಧೂತ್ ವಿನಯ್ ಗುರೂಜಿಯವರ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ನಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿರುವ ಬಡ ಜನರಿಗೆ ಮನೆ ಕಟ್ಟಲು ಆರ್ಥಿಕವಾಗಿ ಸಹಾಯ ಮಾಡುವ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಕರ್ನಾಟಕ ಸರಕಾರಕ್ಕೆ ಮನವಿ ನೀಡಿದ್ದರು.
ಇದೀಗ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಸುಮಾರು ೭೭೫ ಕುಟುಂಬಳಿಗೆ ಮನೆ ಕಟ್ಟಲು ಆರ್ಥಿಕ ಸಹಾಯ ನೀಡಲು ಸರಕಾರ ಮುಂದಾಗಿದ್ದು, ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ಗೆ ಬಸವ ವಸತಿ ಯೋಜನೆಯಡಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆಯಡಿಯಲ್ಲಿ ಹೆಚ್ಚುವರಿ ೧೦೦ ಮನೆಗಳನ್ನು ೨೦೨೨-೨೩ ನೇ ಸಾಲಿನ ಮನೆಗಳ ಗುರಿಯಲ್ಲಿ ಮಂಜೂರು ಮಾಡಿ ಆದೇಶಿಸಿದೆ.
ಶ್ರೀವತ್ಸರವರ ನಿರಂತರ ಪ್ರಯತ್ನದಿಂದ ರಾಜ್ಯ ಸರಕಾರದಿಂದ ಮಂಜೂರಾದ ಮನೆ ನಿರ್ಮಾಣ ಯೋಜನೆಯಿಂದ ಸುಬ್ರಹ್ಮಣ್ಯ ಗ್ರಾಮದ ಜನರಲ್ಲಿ ಸಂತಸ ಮೂಡಿದ್ದು, ಬಡ ಜನರ ಬಾಳಿಗೆ ಬೆಳಕಾದ ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ಟ್ರಸ್ಟಿ ಶ್ರೀವತ್ಸರವರ ಬಗ್ಗೆ ಗ್ರಾಮದ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.