ಸುಳ್ಯ: ಕಾಂತಾರ ಸಿನಿಮಾ ವೀಕ್ಷಣೆಗೆ ಬಂದಿದ್ದ ಕೇರಳ ಮೂಲದ ಮುಸ್ಲಿಂ ವಿದ್ಯಾರ್ಥಿ-ವಿದ್ಯಾರ್ಥಿನಿಯ ಜೋಡಿಗೆ ಅದೇ ಸಮುದಾಯದ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆಯೊಂದು ಸುಳ್ಯದಲ್ಲಿ ನಡೆದಿದೆ.
ಸಂತೋಷ್ ಥಿಯೇಟರ್ ನಲ್ಲಿ ನಿನ್ನೆ ಸುಮಾರು ಹನ್ನೊಂದು ಗಂಟೆಯ ವೇಳೆಗೆ ಚಿತ್ರ ವೀಕ್ಷಣೆಗೆ ಕೇರಳ ಮೂಲದ ಸಹಪಾಠಿಗಳಿಬ್ಬರು ಬಂದಿದ್ದು, ಬಂದವರೇ ಥಿಯೇಟರ್ ಪಕ್ಕದ ಕಾಂಪೌಂಡ್ ಬಳಿಯಲ್ಲಿ ಬೈಕ್ ನಿಲ್ಲಿಸಿ, ತೆರಳಲು ತಯಾರಾಗುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಅಲ್ಲೇ ಪಕ್ಕದ ಅಂಗಡಿಯ ಬಳಿಯಲ್ಲಿ ಕುಳಿತಿದ್ದ ಯುವಕರ ತಂಡವೊಂದು ಆಗಮಿಸಿ ಏಕಾಏಕಿ ಹಲ್ಲೆ ನಡೆಸಿದ್ದು, ವಿದ್ಯಾರ್ಥಿ ಹಾಗೂ ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿಗೆ ಹಲ್ಲೆ ನಡೆಸುತ್ತಿದ್ದ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ವಿಷಯ ತಿಳಿದು ಪೊಲೀಸರು ಆಗಮಿಸಿದ್ದಾರೆ. ಘಟನೆಯ ವಿಡಿಯೋವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಆಧಾರದಲ್ಲಿ ಹಲ್ಲೆ ನಡೆಸಿದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಧಾರ್ಮಿಕ ಕಾರಣಕ್ಕಾಗಿ ಸಿನಿಮಾ ವೀಕ್ಷಿಸಲು ಯುವಕರ ತಂಡ ತಡೆಯೊಡ್ಡಿ ಹಲ್ಲೆ ನಡೆಸಿದ್ದಾರೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದ್ದು, ಕಾಂತಾರ ಸಿನಿಮಾವನ್ನು ಮುಸ್ಲಿಮರು ವೀಕ್ಷಿಸಬಾರದೇ ಎನ್ನುವ ಬಗ್ಗೆ ಗಂಭೀರ ಚರ್ಚೆಗಳು ಎದ್ದಿವೆ.