ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ನೇರ ಭಾಗಿಯಾದವರ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೇ ಅಪರಾಧ ಎಸಗಿದವರು ಮನೆಗೆ ಬೀಗ ಹಾಕಿ ಹೋಗಿರುವುದರಿಂದ ಬಂಧನ ಸ್ವಲ್ಪ ತಡ ಆಗಿದೆ. ಪ್ರಕರಣವನ್ನು ಎನ್ಐಎ ಗೆ ಹಸ್ತಾಂತರಿಸಲು ಸರಕಾರ ನಿರ್ಧರಿಸಿದ್ದರೂ ಅಪರಾಧಿಗಳನ್ನು ಸದ್ಯದಲ್ಲೇ ಕರ್ನಾಟಕ ಪೊಲೀಸರ ಬಂಧಿಸುತ್ತಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಗುರುವಾರ ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರವೀಣ್ ಹತ್ಯೆ ಪ್ರಕರಣದ ತನಿಖೆ ಬಗ್ಗೆ ಮಾಹಿತಿ ಪಡೆದರು.
ಮೂವರ ವಿಚಾರಣೆ ನಡೆಯುತ್ತಿದೆ ಕೃತ್ಯದಲ್ಲಿ ನೇರ ಭಾಗಿಯಾದವರು ಕೂಡಲೇ ಅಲರ್ಟ್ ಆಗಿ ತಪ್ಪಿಸಿಕೊಳ್ಳುತ್ತಾರೆ. ಸಹಕರಿಸಿದವರು ನಿಧಾನಕ್ಕೆ ಅಲರ್ಟ್ ಆಗುತ್ತಾರೆ. ಹಾಗಾಗಿ ಪ್ರಮುಖ ಆರೋಪಿಗಳ ಬಂಧನದಲ್ಲಿ ತಡವಾಗಿದೆ ಎಂದರು. ಪ್ರಕರಣದಲ್ಲಿ ಯಾರು ಶಾಮೀಲಾಗಿದ್ದಾರೆ ಮತ್ತು ಸಂಚು ರೂಪಿಸಿದವರು ಯಾರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎಲ್ಲರನ್ನೂ ಬಂಧಿಸಲಾಗುವುದು. ಅಮಾಯಕರಿಗೆ ಪೊಲೀಸರು ತೊಂದರೆ ಕೊಡುವುದಿಲ್ಲ ಎಂದು ಅವರು ಹೇಳಿದರು.
ಕೊಲೆ ಮಾಡಿದವರನ್ನು ಹಿಡಿಯುವುದರ ಜೊತೆಯಲ್ಲಿ ಅದಕ್ಕೆ ಪ್ರಚೋದನೆ ನೀಡಿದವರು ಯಾರು ಎಂಬುದನ್ನು ಕೂಡ ಪತ್ತೆ ಮಾಡಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಲಾದ ವಸ್ತುಗಳು, ಸಾಕ್ಷ್ಯಗಳ ಪರಿಶೀಲನೆ ನಿಮಿತ್ತ ಠಾಣೆಗೆ ಭೇಟಿ ನೀಡಿದ್ದೇನೆ ಎಂದರು.
ಎನ್ಐಎಗೆ ಪ್ರಕರಣದ ಹಸ್ತಾಂತರ ಇನ್ನಷ್ಟೇ ಆಗಬೇಕಿದೆ. ಆದರೇ ಎನ್ಐಎ ಅಧಿಕಾರಿಗಳ ಜೊತೆಗೆ ಹಾಗೂ ಇತರ ಕೇಂದ್ರದ ಏಜೆನ್ಸಿಗಳ ಜತೆಯೂ ಪ್ರಕರಣದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ತನಿಖೆ ಎನ್ಐಎ ಮಾಡಿದರೂ ಪ್ರಮುಖ ಆರೋಪಿಯನ್ನು ನಾವೇ ಬಂಧಿಸುತ್ತೇವೆ ಎಂದು ಅವರು ತಿಳಿಸಿದರು.
ಕೇರಳ ಗಡಿಭಾಗದಲ್ಲಿ ಒಟ್ಟು 18 ಚೆಕ್ ಪೋಸ್ಟ್ ಹಾಕಲಾಗಿದ್ದು ಕೆಎಸ್ಆರ್ಪಿ ಪೊಲೀಸರನ್ನು ನಿಯೋಜಿಸಲಾಗಿದೆ. ಗಡಿ ಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಅಪರಾಧಿಗಳು ಸರೆ ಸಿಕ್ಕಿದ ನಂತರವೂ ಈ ವ್ಯವಸ್ಥೆ ಕನಿಷ್ಠ ಒಂದು ವರ್ಷ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.