ಸುಳ್ಯ: ಬಂಟ್ವಾಳದಲ್ಲಿ ಮದುವೆ ಕಾರ್ಯಕ್ರಮವನ್ನು ಮುಗಿಸಿ ವಾಪಾಸ್ಸು ಸುಳ್ಯಕ್ಕೆ ತೆರಳುತ್ತಿದ್ದಾಗ ಸುಳ್ಯ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಹತ್ತಿರ ವೆಂಕಟರಮಣ ಸೊಸೈಟಿ ಬಳಿ ಸುಳ್ಯದ ನಿವಾಸಿ ಮಹಮ್ಮದ್ ಸಾಯಿ ಎಂಬವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಜೂನ್ ೫ ರ ರಾತ್ರಿ 10:30 ನಡೆದಿತ್ತು. ಈ ಪ್ರಕರಣದ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಮೂಲದ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಮ್ಮದ್ ಸಾಯಿ ತನ್ನ ಕ್ರೇಟಾ ಕಾರನ್ನು ನಿಲ್ಲಿಸಿ ಕಾರಿನ ಬಳಿಗೆ ಬಂದು ಡೋರ್ ತೆರೆಯಲು ಸಿದ್ದತೆ ಮಾಡುತ್ತಿರುವಾಗ ಜ್ಯೋತಿ ಸರ್ಕಲ್ ಕಡೆಯಿಂದ ಬಂದ ಕೆಎ 12 ರಿಜಿಸ್ಟರ್ನ ಸ್ಕಾರ್ಪಿಯೋ ಕಾರಿನಲ್ಲಿದ್ದ ನಾಲ್ಕು ಜನ ಕೊಲ್ಲುವ ಯಾವುದೋ ಬೇರೆ ಉದ್ದೇಶದಿಂದ ಗುಂಡು ಹಾರಿಸಿದ್ದಾರೆ. ಇದು ಮಹಮ್ಮದ್ ಸಾಯಿ ಅವರ ಬೆನ್ನಿಗೆ ತಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು. ಅಂತೆಯೇ ಕಾರಿನ ಎರಡು ಡೋರ್ಗಳಿಗೆ ಹಾನಿಯಾಗಿದೆ.
ಬಂಧಿತ ಆರೋಪಿಗಳನ್ನು ಕುಶಾಲನಗರ ಹೊಸೂರು ನಿವಾಸಿ ಕೆ ಜಯನ್ (38), ಮಡಿಕೇರಿ ಮುಳಿಯ ಲೇ ಔಟ್ ನಿವಾಸಿ ವಿನೋದ್ ಆರ್ (34), ಮಡಿಕೇರಿ, ಸಿಎಂ.ಸಿ ಕ್ವಾಟ್ರಾಸ್ ರಾಣಿ ಬೆಟ್ಟು ನಿವಾಸಿ ಮನೋಜ್ (25) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ಕಾರು ಹಾಗೂ ನಾಡ ಪಿಸ್ತೂಲು ಹಾಗೂ ಎರಡು ಸಜೀವ ತೋಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದ ಆರೋಪಿ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಪುತ್ತೂರು ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಡಾ| ಗಾನಾ ಪಿ ಕುಮಾರಿ ಮತ್ತು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ರವರ ಮಾರ್ಗದರ್ಶನದಂತೆ ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ ಆರ್ ಮತ್ತು ತಂಡ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ದಿಲೀಫ್ ಜಿ.ಆರ್ ಪಿಎಸ್ಐ ಸುಳ್ಯ, ರತ್ನಕುಮಾರ್ ಪಿಎಸ್ಐ ಸುಳ್ಯ (ತನಿಖೆ), ಪ್ರೋ. ಪಿಎಸ್ಐ ಸರಸ್ವತಿ ಬಿ.ಟಿ, ಎಎಸ್ಐ ರವೀಂದ್ರ, ಎಎಸ್ಐ ಶಿವರಾಮ, ಹೆಡ್ ಕಾನ್ಸ್ಟೇಬಲ್ ಧನೇಶ್, ಉದಯ ಗೌಡ, ಪಿಸಿ ಅನಿಲ್ , ಪಿಸಿ ಅನುಕುಮಾರ್, ಪಿಸಿ ಹೈದರಾಲಿ, ಪಿಸಿ ಸುನಿಲ್ ತಿವಾರಿ, ಪಿಸಿ ನಾಗರಾಜ್ ಮತ್ತು ಇತರ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.