ರಾಜ್ಯಾದ್ಯಂತ ಇಂದಿನಿಂದ SSLC ಮುಖ್ಯ ಪರೀಕ್ಷೆಆರಂಭಗೊಂಡಿದೆ. ಈ ಪರೀಕ್ಷೆಯಲ್ಲಿಯೂ ಹಿಜಾಬ್ ಸಂಘರ್ಷ ಮುಂದುವರೆದಿದೆ. ಅನೇಕ ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ಧರಿಸಿಯೇ ಬಂದ ವಿದ್ಯಾರ್ಥಿನಿಯರನ್ನು ಹಿಜಾಬ್ ತೆಗೆದು ಎಂಟ್ರಿ ನೀಡಲಾಯಿತು.
ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ಹೈಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎನ್ನದೆ ಪರೀಕ್ಷೆಗೆ ಬಂದಿದ್ದಾಳೆ. ಶಿವಮೊಗ್ಗ ನಗರದ ಕಸ್ತೂರಿಬಾ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದಂತ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು, ಹಿಜಾಬ್ ಧರಿಸಿಯೇ ಆಗಮಿಸಿದ್ದಳು. ಆ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರ ಮೇಲ್ವಿಚಾರಕರು, ತರಗತಿಗೆ ಅವಕಾಶವಿಲ್ಲ, ಸಮವಸ್ತ್ರ ಧರಿಸಿ ಬಂದರೆ ಮಾತ್ರವೇ ಅನುಮತಿ ಎಂಬುದಾಗಿ ಸೂಚಿಸಿದರು. ಹೀಗಾಗಿ ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿನಿ ಮನೆಗೆ ತೆರಳುವಂತಾಗಿತ್ತು. ಆ ವಿದ್ಯಾರ್ಥಿನಿಯನ್ನು ಮತ್ತೆ ಪೋಷಕರು ಮನವೊಲಿಸಿ ಮರಳಿ ಪರೀಕ್ಷೆಗೆ ಕರೆತಂದ ಘಟನೆ ನಡೆಯಿತು.
ಹುಬ್ಬಳ್ಳಿಯಲ್ಲೂ ಇಂತಹದ್ದೇ ಘಟನೆ..!
ಶಾಲಾ ಸಮವಸ್ತ್ರ ಧರಿಸದೆ ಬುರ್ಖಾಕಾಧಾರಿಯಾಗಿ ಬಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಮೇಲ್ವಿಚಾರಕರ ಮನವಿ ಮೇರೆಗೆ ವಾಪಸ್ ಮನೆಗೆ ತೆರಳಿ ಸಮವಸ್ತ್ರ ಧರಿಸಿಕೊಂಡು ವಾಪಸ್ ಬಂದ ಘಟನೆ ಹುಬ್ಬಳ್ಳಿಯ ಶಾಂತಿನಿಕೇತನ ಪರೀಕ್ಷಾ ಕೇಂದ್ರದಲ್ಲಿ ಸಂಭವಿಸಿದೆ.
ವಿದ್ಯಾರ್ಥಿನಿ ಸರ್ದಾರ್ ಮೆಹಬೂಬ್ ಅಲಿಖಾನ್ ಎಂಬಾಕೆ ಬುರ್ಕಾ ಧರಿಸಿ ಪರೀಕ್ಷೆ ಬರೆಯಲು ಬಂದಿದ್ದರು. ತಪಾಸಣೆ ವೇಳೆ ವಿದ್ಯಾರ್ಥಿನಿ ಸಮವಸ್ತ್ರ ಧರಿಸದೇ ಇರುವುದು ಕಂಡು ಬಂದ ಹಿನ್ನೆಲೆ, ಸಮವಸ್ತ್ರ ಧರಿಸಿಕೊಂಡು ಬರುವಂತೆ ಅಧಿಕಾರಿಗಳು ತಿಳಿಹೇಳಿದರು. ಸಮವಸ್ತ್ರ ಧರಿಸಿಕೊಂಡು ಬರಲು ಪಾಲಕರ ಜತೆ ಮನೆಗೆ ವಾಪಸ್ಸಾಗಿದ್ದ ವಿದ್ಯಾರ್ಥಿನಿ, ಕೆಲವೇ ನಿಮಿಷದಲ್ಲಿ ಸಮವಸ್ತ್ರ ಧರಿಸಿಕೊಂಡು ಬಂದು ಪರೀಕ್ಷಾ ಕೊಠಡಿಗೆ ತೆರಳಿದ್ದಾಳೆ.
ಪರೀಕ್ಷಾ ಕೊಠಡಿಗೆ ಹಿಜಾಬ್ ಧರಿಸಿ ಬಂದ ಮೇಲ್ವಿಚಾರಕಿ.!
ಮೇಲ್ವಿಚಾರಕಿಯೊಬ್ಬರು ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜಾಜಿನಗರದ ಕೆ ಟಿ ಎಸ್ ವಿ ಪರೀಕ್ಷಾ ಕೇಂದ್ರಕ್ಕೆ ಮೇಲ್ವಿಚಾರಕಿ ನೂರ್ ಫಾತೀಮಾ ಹಿಜಾಬ್ ಧರಿಸಿ ಬಂದಿದ್ದು, ಬಳಿಕ ಅವರನ್ನು ಪರೀಕ್ಷಾ ಕರ್ತವ್ಯದಿಂದ ಅಮಾನತುಗೊಳಿಸಿ ಮತ್ತೊಬ್ಬ ಮೇಲ್ವಿಚಾರಕರಿಗೆ ಅವಕಾಶ ಮಾಡಿಕೊಡಲಾಗಿದೆ.