ಬೆಂಗಳೂರು: ರಾಜ್ಯದಲ್ಲಿ ತಾರಕ್ಕೇರಿರುವಂತ ಹಿಜಾಬ್ ವಿರೋಧಿಸಿ, ಕೇಸರಿ ಶಾಲು ಪ್ರಕರಣಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕೋದಲ್ಲೆ ಸರ್ಕಾರ, ಇಂದಿನಿಂದ 3 ದಿನ ಹೈಸ್ಕೂಲ್, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಈ ನಡುವೆ ನಿನ್ನೆ ವಿಚಾರಣೆ ಆರಂಭಗೊಂಡಿದ್ದಂತ ಹಿಜಾಬ್ ಅನುಮತಿ ಕೋರಿ ಅರ್ಜಿಯ ವಿಚಾರಣೆ, ಇಂದು ಹೈಕೋರ್ಟ್ ನಲ್ಲಿ ಮುಂದುವರೆದಿದೆ. ಇಂದು ವಿಚಾರಣೆ ಆರಂಭವಾಗುತ್ತಿದ್ದಂತೆ, ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಸಲಹೆ ಮಾಡಿದ್ದಾರೆ. ಹೀಗಾಗಿ ಈಗ ಹಿಜಾಬ್ ಅನುಮತಿ ಅರ್ಜಿ, ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆಗೊಂಡಿದೆ.
ಇಂದು ಮಧ್ಯಾಹ್ನ 2.30ರ ಬಳಿಕ ಹೈಕೋರ್ಟ್ ನಲ್ಲಿ ಹಿಜಾಬ್ ಧರಿಸೋದಕ್ಕೆ ಅನುಮತಿ ಕೋರಿ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ಆರಂಭಗೊಂಡಿತು. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ಅರ್ಜಿದಾರರು ಅನುಮತಿ ನೀಡಿದ್ರೇ.. ಈ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗುವುದು ಎಂದರು.
ಈ ವೇಳೆ ಹಿರಿಯ ವಕೀಲ ಸಂಜಯ್ ಹೆಗಡೆ ಅವರು ತಮ್ಮ ವಾದವನ್ನು ನ್ಯಾಯಪೀಠದ ಮುಂದೆ ಇಟ್ಟು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಎರಡು ತಿಂಗಳಲ್ಲಿ ಮುಗಿಯಲಿದೆ. ಆದರೊಳಗೆ ವಿವಾದ ಬಗೆ ಹರಿಯಬೇಕು. ಈ ಅರ್ಜಿಯ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅವಶ್ಯಕತೆ ಇಲ್ಲ ಎಂಬುದಾಗಿ ಹೇಳಿದರು. ಈ ಎಲ್ಲಾ ಬೆಳವಣಿಗೆ ನಡುವೆ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ಮುಂದುವರೆದಿತ್ತು.
ಈ ಎಲ್ಲಾ ವಾದದ ಬಳಿಕ ಈ ಪ್ರಕರಣ ವಿಸ್ತೃತ ನ್ಯಾಯಪೀಠದಲ್ಲಿ ವಿಚಾರಣೆಗೆ ಯೋಗ್ಯವಾಗಿದೆ. ಮುಖ್ಯ ನ್ಯಾಯಮೂರ್ತಿಗಳೇ ಈ ಬಗ್ಗೆ ವಿವೇಚನಾಧಿಕಾರ ಹೊಂದಿದ್ದಾರೆ ಎಂಬುದಾಗಿ ತಿಳಿಸಿದಂತ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ಹೈಕೋರ್ಟ್ ರಿಜಿಸ್ಟಾರ್ ಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ ತಕ್ಷಣವೇ ಸಂಪೂರ್ಣ ಕಡತವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕುಳುಹಿಸಿ ಕೊಡುವಂತೆಯೂ ಸೂಚಿಸಿದ್ದಾರೆ. ಹೀಗಾಗಿ ಈಗ ಹಿಜಾಬ್ ಗೆ ಅನುಮತಿ ಕೋರಿದಂತ ಅರ್ಜಿಯ ವಿಚಾರಣೆ, ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಅಂಗಳಕ್ಕೆ ಬಂದು ನಿಂತಂತೆ ಆಗಿದೆ.