ಉಡುಪಿ: ಇಲ್ಲಿನ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಅಣ್ಣನೋರ್ವ ತನ್ನ ತಮ್ಮನನ್ನೇ ಹೊಡೆದು ಬಾವಿಗೆ ಎಸೆದು ಕೊಲೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಇನ್ನೋರ್ವ ಸಹೋದರ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೊಲೆಯಾದ ವ್ಯಕ್ತಿ ಶಿವಪುರ ಗ್ರಾಮದ ಕಾಳಾಯಿ ಮುಳ್ಳುಗುಡ್ಡೆಯ ನಿವಾಸಿ ರವಿರಾಜ ಸೆಟ್ಟಿಗಾರ ಎನ್ನಲಾಗಿದೆ.
ಜ.13ರ ಬೆಳಗ್ಗೆ 8 ಗಂಟೆಯಿಂದ ಜ.14ರ ಬೆಳಗ್ಗೆ 9 ಗಂಟೆಯ ಮಧ್ಯಾವಧಿಯಲ್ಲಿ ರವಿರಾಜ ಸೆಟ್ಟಿಗಾರ ಎಂಬವರ ಮೃತದೇಹ ಮನೆಯ ಹತ್ತಿರದ ಆವರಣವಿಲ್ಲದ ಬಾವಿಯಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಬಾವಿಯಿಂದ ಮೇಲೆತ್ತಿದಾಗ ತಲೆಯ ಹಿಂಬದಿಯಲ್ಲಿ ರಕ್ತಗಾಯ ಆಗಿರುವುದು ಕಂಡು ಬಂದಿದ್ದರಿಂದ ಈ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ರವಿರಾಜರ ಇನ್ನೋರ್ವ ಸಹೋದರ ಜಯರಾಮ ಸೆಟ್ಟಿಗಾರ ಹೆಬ್ರಿ ಠಾಣೆಗೆ ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ರವಿರಾಜರ ತಲೆಯ ಹಿಂಭಾಗದಲ್ಲಿ ಯಾವುದೋ ಹರಿತವಾದ ಆಯಧದಿಂದ ಬಲವಾಗಿ ಕಡಿದು ಗಾಯಗಳಾಗಿರುವುದು ಕಂಡುಬಂದಿದೆ. ಅದೇ ರೀತಿ ತನಿಖೆ ವೇಳೆ ಹಾಜರಿದ್ದ ಪಂಚಾಯತುದಾರರು ಕೂಡ ಮೃತರನ್ನು ಯಾವುದೋ ಹರಿತವಾದ ಆಯಧದಿಂದ ಯಾರೋ ಬಲವಾಗಿ ಕಡಿದು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿರುವುದಾಗಿ ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮನೆಯ ಬಳಿ ಇರುವ ಕೋಣೆಯ ಮಾಡನ್ನು ಕಿತ್ತು ಹಾಕಿರುವ ವಿಚಾರದಲ್ಲಿ ಶಂಕರನಾರಾಯಣ ಸೆಟ್ಟಿಗಾರ ಹಾಗೂ ರವಿರಾಜ್ ಸೆಟ್ಟಿಗಾರ್ ನಡುವೆ ವೈಮನಸ್ಸು ಇದ್ದು ಅದೇ ವಿಚಾರದಲ್ಲಿ ಶಂಕರನಾರಾಯಣ ಸೆಟ್ಟಿಗಾರ್, ತನ್ನ ತಮ್ಮ ರವಿರಾಜ ಸೆಟ್ಟಿಗಾರನನ್ನು ಕೊಲೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಹೆಬ್ರಿ ಪೊಲೀಸರು ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.