ಬೆಳಗಾವಿ: ಕಲ್ಲು ಬಂಡೆಗಳ ನಡುವೆ 140 ಅಡಿ ಕಂದಕಕ್ಕೆ ಬಿದ್ದರೂ ಯುವಕ ಪವಾಡಸದೃಶ್ಯ ಎಂಬಂತೆ ಬದುಕಿ ಬಂದಿರುವ ಅಚ್ಚರಿಯ ಘಟನೆ ಗೋಕಾಕ್ ಫಾಲ್ಸ್ ಬಳಿ ಸಂಭವಿಸಿದೆ.
ಸ್ನೇಹಿತರೊಂದಿಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಪ್ರದೀಪ ಸಾಗರ್, ಆಯತಪ್ಪಿ ಅ. 2ರಂದು ಸಂಜೆ 140 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದ. ಕೂಡಲೇ ಪ್ರದೀಪ್ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಗೋಕಾಕ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ. ಕತ್ತಲಾದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಿ ನಿನ್ನೆ ಸಿಬ್ಬಂದಿಗಳು ವಾಪಸ್ ತೆರಳಿದ್ದರು. 140 ಅಡಿ ಆಳದ ಕಂದಕಕ್ಕೆ ಬಿದ್ದ ಪ್ರದೀಪ ಪ್ರಜ್ಞೆ ಕಳೆದುಕೊಂಡಿದ್ದರು. ಹೀಗಾಗಿ ಇಡೀ ರಾತ್ರಿ ಕಂದಕದಲ್ಲೇ ಪ್ರದೀಪ ಸಾಗರ್ ಕಾಲ ಕಳೆಯಬೇಕಾಗಿತು.
ಆದರೆ ಇಂದು ಬೆಳಗಿನ ಜಾವ 4 ಗಂಟೆಗೆ ಪ್ರದೀಪ್ ಪ್ರಜ್ಞೆ ಬಂದ ಮೇಲೆ ತಾನೇ ಸ್ನೇಹಿತರಿಗೆ ಫೋನ್ ಮಾಡಿದ್ದಾರೆ. ಬಳಿಕ ಗೋಕಾಕ್ದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ಹಾಗೂ ಪೊಲೀಸರ ತಂಡ ಪ್ರದೀಪನನ್ನು ರಕ್ಷಣೆ ಮಾಡಿದೆ. ಸದ್ಯ ಪ್ರದೀಪನನ್ನು ರಕ್ಷಿಸಿ ಗೋಕಾಕದ ಖಾಸಗಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ.