ಮೈಸೂರು: ಮದ್ವೆಯಾಗಿ ಎರಡು ಮಕ್ಕಳಿದ್ದರೂ ದೇವಸ್ಥಾನದ ಅರ್ಚಕನ ಜೊತೆ ಪರಾರಿಯಾಗಿದ್ದ ಮಹಿಳೆ ಸ್ಥಿತಿ ಇದೀಗ ಹೇಳ ತೀರದು. ಬಾಳು ಕೊಡುವುದಾಗಿ ನಂಬಿಸಿ ಕರೆದೊಯ್ದ ಯುವ ಅರ್ಚಕ, 10 ದಿನ ಆಕೆಯ ಜತೆ ಸುತ್ತಾಡಿ ಕೊನೆಗೆ ಮಧ್ಯರಾತ್ರಿ ಕಾಡಲ್ಲಿ ಬಿಟ್ಟು ಹೋಗಿದ್ದಾನೆ.
ಇಂತಹ ವಿಚಿತ್ರ ಪ್ರಕರಣ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಕೊಲ್ಲೂಪುರ ಗ್ರಾಮದಲ್ಲಿ ಸಂಭವಿಸಿದೆ. ಮಹದೇಶ್ವರ ದೇವಸ್ಥಾನದಲ್ಲಿ 35 ವರ್ಷದ ಗೃಹಿಣಿಯೊಬ್ಬಳು ಶಾಸ್ತ್ರ ಕೇಳಲು ಹೋದಾಗ 21 ವರ್ಷ ವಯಸ್ಸಿನ ಅರ್ಚಕ ಸಂತೋಷ್ ಎಂಬಾತನ ಪರಿಚಯವಾಗಿತ್ತು. ಗೃಹಿಣಿ ಮತ್ತು ಅರ್ಚಕ ನಡುವೆ ಸಲುಗೆ ಬೆಳೆದು ಪ್ರೇಮಾಂಕುರವಾಗಿದೆ. ಎಲ್ಲಿಗಾದರೂ ಹೋಗೋಣ ಬಾ… ನಿನಗೆ ಬಾಳು ಕೊಡುವೆ ಎಂದು ಅರ್ಚಕ ನಂಬಿಸಿದ್ದ. ಈತನ ಮಾತಿಗೆ ಮರುಳಾದ ಮಹಿಳೆ, ಗಂಡ-ಮಕ್ಕಳನ್ನು ಬಿಟ್ಟು ತವರು ಮನೆಯಿಂದ ನಾಪತ್ತೆಯಾಗಿದ್ದಳು.
ಮಹಿಳೆಯ ಕುಟುಂಬಸ್ಥರರು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ, ಆಕೆ ಮಾತ್ರ ಪ್ರಿಯಕರನ ಜೊತೆ ಜ್ವಾಲಿ ರೈಡ್ ಮಾಡುತ್ತಿದ್ದಳು. 10 ದಿನ ಒಟ್ಟಿಗೆ ತಿರುಗಾಡುತ್ತಿದ್ದವ, ನಿನ್ನೆ ವರಸೆ ಬದಲಿಸಿ ಮದ್ವೆ ಆಗೋಕೆ ಮನೆಯಲ್ಲಿ ಒಪ್ಪಲ್ಲ ಎಂದು ಉಲ್ಟಾ ಹೊಡೆದಿದ್ದಾನೆ. ಎಲ್ಲಿಯಾದರೂ ದೂರ ಹೋಗಿ ಬದುಕೋಣ ಎಂದರೂ ಆತ ಸಮ್ಮತಿಸಿಲ್ಲ. ಊರಿಗೆ ವಾಪಸ್ ಹೋಗೋಣ, ಅಲ್ಲಿಯೇ ನನಗೆ ತಾಳಿ ಕಟ್ಟು, ನಾನು ನಿನ್ನೊಂದಿಗೇ ಬಾಳುವೆ ಎಂದು ಮಹಿಳೆ ಗೋಗರೆದರೂ ಕಿವಿಗೊಡದ ಆತ, ಅಲ್ಲಿಗೆ ಹೋದರೆ ನಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಹೆದರಿಸಿದ್ದಾನೆ. ಕೊನೆಗೆ ಇಬ್ಬರೂ ಸಾವಲ್ಲಿ ಒಂದಾಗೋಣ, ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದ.
ರಾತ್ರಿ 12 ಗಂಟೆ ಸುಮಾರಿಗೆ “ಇಲ್ಲೇ ಇರು ಬರ್ತೀನಿ ಒಂದೈದು ನಿಮಿಷ” ಅಂತ ಹೋದವ ಕತ್ತಲಲ್ಲೇ ಕಾಲ್ಕಿತ್ತಿದ್ದಾನೆ. ಮಹಿಳೆ ಪ್ರಿಯಕರನ ಬರುವಿಕೆಗಾಗಿ ಇಡೀ ರಾತ್ರಿ ಕಾಡುಪ್ರಾಣಿ, ಸರೀಸೃಪಗಳ ಭಯದಲ್ಲೇ ಕಾಡಿನಲ್ಲಿ ಕಾದಿದ್ದಾಳೆ.
ಬೆಳಗಾದರೂ ಪ್ರಿಯಕರ ಬಂದಿಲ್ಲ. ಅಲ್ಲಿಂದ ನಡೆದುಕೊಂಡೇ ಕಾಡಂಚಿಗೆ ಬಂದು ಕುಳಿತಿದ್ದ ಒಬ್ಬಂಟಿ ಮಹಿಳೆಯನ್ನ ಕಂಡ ಸ್ಥಳೀಯರು ಸ್ಥಳಕ್ಕೆ ಬಂದಿದ್ದಾರೆ. ಮಹಿಳೆಯ ಕಣ್ಣೀರ ಕಥೆ ಕೇಳಿದ ಗ್ರಾಮಸ್ಥರು, ಹುಲ್ಲಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರ ಮುಂದೆ ಮಹಿಳೆ ಕಣ್ಣೀರು ಹಾಕಿದ್ದು, ನನಗೆ ನ್ಯಾಯ ಕೊಡಿಸಿ ಎಂದು ಗೋಗರೆದಿದ್ದಾಳೆ. ನನಗೆ ಸಂತೋಷ್ ಬೇಕು, ಆತನ ಜತೆ ಮದ್ವೆ ಮಾಡಿಸಿ. ನನಗೆ ನ್ಯಾಯ ಬೇಕು ಎಂದು ಕಣ್ಣೀರು ಹಾಕಿದ್ದಾಳೆ. ಮಹಿಳೆಯ ಮನವೊಲಿಸಿ ಪೊಲೀಸರು ಕರೆದೊಯ್ದಿದ್ದು, ಸಂತೋಷ್ ಪತ್ತೆಗೆ ಬಲೆ ಬೀಸಿದ್ದಾರೆ.
- ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ಟರೂ ಸ್ವಾಗತಿಸುತ್ತೇನೆ -ಆರೋಪಿ ಫಯಾಜ್ ತಂದೆ ಕಣ್ಣೀರು
- ಕೋಟ್ರಗುತ್ತು: (ಎ.20-21) ಶ್ರೀ ವೈದ್ಯನಾಥ ಮತ್ತು ಪರಿವಾರ ದೈವಗಳ ನೂತನ ಭಂಡಾರಮನೆ ಪ್ರವೇಶ ಹಾಗೂ ಭಂಡಾರಗಳ ಪ್ರತಿಷ್ಠೆ ಕಲಶಾದಿಗಳು ಹಾಗೂ “ಹಸಿರು ಹೊರೆಕಾಣಿಕೆ”ಯ ವೈಭವದ ಮೆರವಣಿಗೆ
- ಬಜ್ಪೆ: ಲಾರಿ ಬ್ರೇಕ್ ಫೇಲ್ ಆಗಿ ಭೀಕರ ಸರಣಿ ಅಪಘಾತ
- ಉಡುಪಿ: ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
- ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏಪ್ರಿಲ್ 24 ರಿಂದ ಪ್ರತಿಬಂಧಕಾಜ್ಞೆ ಜಾರಿ – ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್