Friday, August 14, 2026
spot_imgspot_img
spot_imgspot_img

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸಿಕೊಳ್ಳುವುದು ಕಡ್ಡಾಯ

- Advertisement -
- Advertisement -


ಬೆಂಗಳೂರು: ರಾಜ್ಯದ ಎಲ್ಲ ಪಡಿತರ ಚೀಟಿದಾರರು ಸೆಪ್ಟೆಂಬರ್ 30ರೊಳಗೆ ಕಡ್ಡಾಯವಾಗಿ e-KYC ಮಾಡಿಸಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಝಾನ್ ಅರ್ಷದ್ ತಿಳಿಸಿದ್ದಾರೆ.
ಆಹಾರ ಭವನದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಬಳಿಕ ರಾಜ್ಯದ 2.65 ಕೋಟಿ ಪಡಿತರ ಚೀಟಿಗಳ e-KYC ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದರು.


ಹೊಸದಾಗಿ ಪಡಿತರ ಚೀಟಿಗಳನ್ನು ವಿತರಿಸಲು ಕೇಂದ್ರ ಸರ್ಕಾರ ಸದ್ಯ ನಿರ್ಬಂಧ ವಿಧಿಸಿದೆ. e-KYC ಪೂರ್ಣಗೊಂಡ ಬಳಿಕ ಅನರ್ಹ ಹಾಗೂ ನಿಷ್ಕ್ರಿಯ ಕಾರ್ಡ್‌ಗಳ ಸಂಖ್ಯೆ ತಿಳಿದುಬಂದ ನಂತರ ಹೊಸ ಫಲಾನುಭವಿಗಳ ಸೇರ್ಪಡೆ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಪಾವತಿಸುವವರು ಮತ್ತು ಕಳೆದ 12 ತಿಂಗಳಿಂದ ಪಡಿತರ ಪಡೆಯದವರನ್ನು ಗುರುತಿಸಿ ಕೇಂದ್ರ ಸರ್ಕಾರ 7 ಲಕ್ಷ ಕಾರ್ಡ್‌ಗಳ ಪಟ್ಟಿಯನ್ನು ಕಳುಹಿಸಿದೆ. ಹೀಗಾಗಿ ಹಲವು ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದೆ. ತಾಂತ್ರಿಕ ಕಾರಣಗಳಿಂದ ರದ್ದಾಗಿರುವ ಕಾರ್ಡ್‌ಗಳನ್ನು ಮರುಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆಯಿದ್ದು, ಈಗಾಗಲೇ 4 ಕೋಟಿ ಮಂದಿಗೆ ಆಹಾರ ಭದ್ರತಾ ಯೋಜನೆಯ ಪ್ರಯೋಜನ ತಲುಪಿದೆ. ಇನ್ನೂ 50 ಲಕ್ಷ ಫಲಾನುಭವಿಗಳನ್ನು ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಗೋದಾಮುಗಳಲ್ಲಿ ಸಿಸಿಟಿವಿ, ಪಡಿತರ ಸಾಗಣೆ ವಾಹನಗಳಿಗೆ ಜಿಪಿಎಸ್ ಹಾಗೂ ಗೋದಾಮು ಮತ್ತು ಸಾಗಣೆ ವ್ಯವಸ್ಥೆಯ ಮೇಲ್ವಿಚಾರಣೆಗೆ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಸ್ಥಾಪಿಸಲಾಗುವುದು ಎಂದರು.
ಪ್ರತಿ ತಿಂಗಳು ಆಹಾರ ಕಿಟ್ ವಿತರಿಸುವ ಉದ್ದೇಶದ ಇಂದಿರಾ ಕಿಟ್ ಯೋಜನೆ ಜಾರಿಗೆ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಯೋಜನೆ ಜಾರಿಗೊಳಿಸಲಾಗುವುದು ಎಂದು ರಿಝಾನ್ ಅರ್ಷದ್ ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವ ಯು.ಟಿ.ಖಾದರ್ ಹಿರಿಯ ಹಾಗೂ ಸಮರ್ಥ ನಾಯಕ. ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಅವರು ಉತ್ತಮ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.

- Advertisement -

Related news

error: Content is protected !!