




ಹೈದರಾಬಾದ್: ಜಾನುವಾರು ಸಾಗಾಟಕ್ಕೆ ಸಂಬಂಧಿಸಿದ ವದಂತಿಯ ನಂತರ ಶನಿವಾರ ರಾತ್ರಿ ನಗರದ ಗುಡಿಮಲ್ಕಾಪುರದಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ ನಂತರ ಉದ್ವಿಗ್ನತೆ ಉಂಟಾಗಿದೆ ಎಂದು siasat.com ವರದಿ ಮಾಡಿದೆ.

ಮಧ್ಯರಾತ್ರಿ ಸುಮಾರಿಗೆ ಕೆಲವು ಸ್ವಘೋಷಿತ ಗೋರಕ್ಷಕರು ದನಗಳ ಸಾಗಾಟದ ಅನುಮಾನದ ಮೇಲೆ ಕಂಟೇನರ್ ಅನ್ನು ತಡೆದಾಗ ಗಲಾಟೆ ಪ್ರಾರಂಭವಾಯಿತು. ಆದರೆ, ವಾಹನದಲ್ಲಿ ಪ್ಲೈವುಡ್ ಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ಈ ವೇಳೆ ಕೆಲವರು ಟ್ರಕ್ ಮೇಲೆ ಕಲ್ಲು ತೂರಾಟ ನಡೆಸಿದರು. ಈ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಸ್ಥಳೀಯ ನಿವಾಸಿಗಳು ಅವರನ್ನು ಸ್ಥಳದಿಂದ ಓಡಿಸಿದರು ಎಂದು siasat.com ವರದಿ ಮಾಡಿದೆ.
ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಲು ಪ್ರಯತ್ನಿಸಿದರು. ಕಲ್ಲು ತೂರಾಟದಲ್ಲಿ ಕನಿಷ್ಠ ಇಬ್ಬರು ಪೊಲೀಸರು ಗಾಯಗೊಂಡರು. ಕೆಲವು ದಾರಿಹೋಕರು ಸಹ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಹಲವಾರು ವಾಹನಗಳು ಹಾನಿಗೊಳಗಾಗಿದೆ ಎಂದು ವರದಿಯಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಹೆಚ್ಚುವರಿ ಪಡೆಗಳೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಎಐಎಂಐಎಂ ಶಾಸಕ ಮಜೀದ್ ಹುಸೇನ್ ಕೂಡ ಸ್ಥಳಕ್ಕೆ ತೆರಳಿ ಜನರನ್ನು ಸಮಾಧಾನಪಡಿಸಿದರು. ಮತ್ತಷ್ಟು ಗಲಭೆ ನಡೆಯದಂತೆ ಪೊಲೀಸರು ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾರೆ.
ಘಟನೆಯ ದೃಶ್ಯಾವಳಿಗಳ ಪ್ರಕಾರ, ಶಾಸಕರು ಹಾಗೂ ಸ್ಥಳೀಯರು ಕೆಲಕಾಲ ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿರುವುದು ಕಂಡು ಬಂದಿದೆ. ಸ್ಥಳೀಯರು ಪೊಲೀಸರಿಗೆ ಇದು ಪ್ಲೈವುಡ್ ಸಾಗಿಸುತ್ತಿದ್ದ ಲಾರಿ, ಏಕೆ ಹಿಂಸಾಚಾರ ನಡೆಯುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಇನ್ಸ್ಪೆಕ್ಟರ್ ಲಾಠಿಚಾರ್ಜ್ ಮಾಡುತ್ತೇನೆ ಎಂಬುದಷ್ಟೇ ಹೇಳುವುದು ಕಂಡು ಬಂದಿದೆ. “ನೀವು ಆ ವಾಹನವನ್ನು ಆಸಿಫ್ ನಗರ ಪೊಲೀಸ್ ಠಾಣೆ ಬಳಿ ಇಡಬಹುದಿತ್ತು. ಸಾಮುದಾಯಿಕ ಹಿಂಸೆಗೆ ಸಹಕಾರಿಯಾಗುತ್ತಿರುವ ಇಂತಹ ನಿರರ್ಥಕ ಪೊಲೀಸ್ ವ್ಯವಸ್ಥೆಯಿಂದ ಏನು ಪ್ರಯೋಜನ?” ಎಂದು ಮಜೀದ್ ಹುಸೇನ್ ಪ್ರಶ್ನಿಸಿದರು.








