
ಅಯೋಧ್ಯೆ: ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳವು ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಹಿನ್ನೆಲೆ ತನಿಖೆಯಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿವೆ. ಬಂಧಿತರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕ, ಕಾರು ಮೆಕ್ಯಾನಿಕ್, ನಿವೃತ್ತ ಬ್ಯಾಂಕ್ ನೌಕರ ಹಾಗೂ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಹಿರಿಯ ಅಧಿಕಾರಿಯ ನಂಬಿಕಸ್ಥ ಸಹಾಯಕ ಸೇರಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಹೊರಗುತ್ತಿಗೆ ಸಂಸ್ಥೆಯ ಮೂಲಕ ದೇವಸ್ಥಾನದಲ್ಲಿ ನೇಮಕಗೊಂಡಿದ್ದು, ಭಕ್ತರು ನೀಡಿದ ದೇಣಿಗೆಯ ನಿರ್ವಹಣೆಯಲ್ಲಿದ್ದ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಹಣಕಾಸು ವ್ಯವಹಾರಗಳು, ಆಸ್ತಿ-ಪಾಸ್ತಿಗಳು ಹಾಗೂ ಕಳವು ಸಂಚಿನಲ್ಲಿ ವಹಿಸಿದ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.
ಆರೋಪಿಗಳಲ್ಲೊಬ್ಬರಾದ ಅವಿನಾಶ್ ಶುಕ್ಲಾ ಅವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು, ದೇವಸ್ಥಾನದ ದೇಣಿಗೆ ಹಣ ಎಣಿಕೆ ಮತ್ತು ದಾಖಲೆ ನಿರ್ವಹಣೆಯ ಜವಾಬ್ದಾರಿ ವಹಿಸಿದ್ದರು. ಮತ್ತೊಬ್ಬ ಆರೋಪಿ ಅನುಕಲ್ಪ್ ಮಿಶ್ರಾ, ತಿಂಗಳಿಗೆ ₹15 ಸಾವಿರ ವೇತನದ ಗುತ್ತಿಗೆ ನೌಕರರಾಗಿದ್ದು, ರಾಮ ಮಂದಿರಕ್ಕೆ ಸೇರುವ ಮೊದಲು ಕಾರು ಮೆಕ್ಯಾನಿಕ್ ಆಗಿದ್ದರು.ತನಿಖೆಯಲ್ಲಿ ಅನುಕಲ್ಪ್ ಮಿಶ್ರಾ ಅವರ ಹೆಸರಲ್ಲಿ ಸುಮಾರು ₹65 ಲಕ್ಷ ಮೌಲ್ಯದ ಮನೆ, ಫಾರ್ಮ್ಹೌಸ್, ಐಷಾರಾಮಿ ಬೈಕ್ ಹಾಗೂ ಎಸ್ಯುವಿ ಖರೀದಿ ಬುಕ್ಕಿಂಗ್ ಪತ್ತೆಯಾಗಿದ್ದು, ಅವರ ಆದಾಯಕ್ಕೆ ಮೀರಿ ಆಸ್ತಿ ಸಂಪಾದಿಸಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣದ ಪ್ರಮುಖ ಆರೋಪಿ ರಾಮಶಂಕರ್ ಮಿಶ್ರಾ (ಟಿನ್ನು ಯಾದವ್), ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಚಾಲಕರಾಗಿ ಕೆಲಸ ಆರಂಭಿಸಿ ಬಳಿಕ ದೇವಸ್ಥಾನದ ಆಡಳಿತ ಮತ್ತು ವಿಐಪಿ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ದೇಣಿಗೆ ಎಣಿಕೆ ತಂಡದಲ್ಲಿದ್ದ ಮನೀಷ್ ಕುಮಾರ್ ಯಾದವ್ ಅವರು ಟಿನ್ನು ಯಾದವ್ ಅವರ ಸಂಬಂಧಿಕರಾಗಿದ್ದಾರೆ.ಇನ್ನೊಬ್ಬ ಆರೋಪಿ ಸುಭಾಷ್ಚಂದ್ರ ಶ್ರೀವಾಸ್ತವ, ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು, ಯಾತ್ರಾರ್ಥಿಗಳ ನೆರವು ಕೇಂದ್ರದ ದೇಣಿಗೆ ಸಂಗ್ರಹ ಕೌಂಟರ್ನ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮತ್ತೊಬ್ಬ ಆರೋಪಿ ಕರುಣೇಶ್ ಪಾಂಡೆ, ದೇಣಿಗೆ ಪೆಟ್ಟಿಗೆಗಳನ್ನು ತೆರೆಯುವುದು ಹಾಗೂ ಹಣ ಎಣಿಕೆ ಮಾಡುವ ಜವಾಬ್ದಾರಿ ಹೊಂದಿದ್ದರು.ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ವಿರುದ್ಧ ಇನ್ನಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.








