Friday, July 10, 2026
spot_imgspot_img
spot_imgspot_img

ವರ್ಗಾವಣೆಯಾಗುವ ರಾಜ್ಯ ಸರಕಾರಿ ನೌಕರರಿಗೆ ಸ್ಥಳ ನಿಯುಕ್ತಿ ಕಡ್ಡಾಯ: ಆದೇಶ

- Advertisement -
- Advertisement -

ಬೆಂಗಳೂರು: ಯಾವುದೇ ಅಧಿಕಾರಿ ಅಥವಾ ನೌಕರರನ್ನು ವರ್ಗಾವಣೆ ಮಾಡುವಾಗ ಮುಂದಿನ ಹುದ್ದೆ (Next Posting) ಸೂಚಿಸದೆ ವರ್ಗಾವಣೆ ಮಾಡಬಾರದು ಎಂದು ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.ರಾಜ್ಯ ಸರಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯಲ್ಲಿ ಉಂಟಾಗುತ್ತಿದ್ದ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಈ ಹೊಸ ಮಾರ್ಗಸೂಚಿ ಹೊರಡಿಸಿದೆ.

ಅಬಕಾರಿ ಉಪ ಆಯುಕ್ತ ಕೆ. ಅರುಣ್ ಕುಮಾರ್ ಅವರ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ, ಯಾವುದೇ ನೌಕರರನ್ನು ಸ್ಥಳ ನಿಯುಕ್ತಿ ನೀಡದೆ ಕಡ್ಡಾಯ ನಿರೀಕ್ಷಣೆಯಲ್ಲಿಡುವುದು ನ್ಯಾಯಾಲಯದ ನಿರ್ದೇಶನಕ್ಕೆ ವಿರುದ್ಧವೆಂದು ಸರಕಾರ ಸ್ಪಷ್ಟಪಡಿಸಿದೆ.

ಈ ತೀರ್ಪು ಆಡಳಿತಾತ್ಮಕ ವ್ಯವಸ್ಥೆಯಲ್ಲಿನ ಪ್ರಮುಖ ಬದಲಾವಣೆಗೆ ಕಾರಣವಾಗಿದೆ. ಇದುವರೆಗೆ ಕೆಲ ಸಂದರ್ಭಗಳಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ನಂತರ ತಕ್ಷಣ ಸ್ಥಳ ನಿಯುಕ್ತಿ ನೀಡದೆ ನಿರೀಕ್ಷಣೆಯಲ್ಲಿಡಲಾಗುತ್ತಿತ್ತು. ಇದರಿಂದ ನೌಕರರ ಹಕ್ಕುಗಳಿಗೆ ಧಕ್ಕೆಯಾಗುತ್ತಿತ್ತು ಮತ್ತು ಆಡಳಿತಾತ್ಮಕ ಕಾರ್ಯಚಟುವಟಿಕೆಗಳಲ್ಲಿ ವಿಳಂಬ ಉಂಟಾಗುತ್ತಿತ್ತು.

ಹೊಸ ಮಾರ್ಗಸೂಚಿಯ ಪ್ರಕಾರ, ಸಾಮಾನ್ಯವಾಗಿ ಯಾವುದೇ ಅಧಿಕಾರಿ ಅಥವಾ ನೌಕರರನ್ನು ವರ್ಗಾವಣೆ ಮಾಡುವಾಗ ಮುಂದಿನ ಹುದ್ದೆ (Next Posting) ಸೂಚಿಸದೆ ವರ್ಗಾವಣೆ ಮಾಡಬಾರದು. ಇದು ನೌಕರರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಆಡಳಿತಾತ್ಮಕ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಾನೂನು ಸಂಬಂಧಿತ ಸಮಸ್ಯೆಗಳು, ಅಮಾನತು, ಹಣದ ದುರ್ಬಳಕೆ, ಅಧಿಕಾರ ದುರುಪಯೋಗ, ಗಂಭೀರ ಇಲಾಖಾ ವಿಚಾರಣೆಗಳಂತಹ ಪ್ರಕರಣಗಳಲ್ಲಿ ಮಾತ್ರ ತಕ್ಷಣ ಸ್ಥಳ ನಿಯುಕ್ತಿ ನೀಡಲು ಸಾಧ್ಯವಾಗದಿದ್ದರೆ, ಗರಿಷ್ಠ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಡ್ಡಾಯ ನಿರೀಕ್ಷಣೆಯಲ್ಲಿಡಬಾರದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಅತ್ಯಂತ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ, ಸೂಕ್ತ ಕಾರಣಗಳನ್ನು ಲಿಖಿತವಾಗಿ ದಾಖಲಿಸಿ, ಮುಖ್ಯಮಂತ್ರಿಯವರ ಪೂರ್ವಾನುಮೋದನೆ ಪಡೆದು ಗರಿಷ್ಠ ಮೂರು ತಿಂಗಳವರೆಗೆ ಕಡ್ಡಾಯ ನಿರೀಕ್ಷಣೆಯಲ್ಲಿಡಬಹುದು. ಇದು ಆಡಳಿತಾತ್ಮಕ ನಿರ್ಧಾರಗಳಿಗೆ ರಾಜಕೀಯ ಮತ್ತು ಕಾನೂನುಮಟ್ಟದ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ. ಈ ಆದೇಶವು ನೌಕರರ ಹಕ್ಕುಗಳನ್ನು ಕಾಪಾಡುವ ಜೊತೆಗೆ, ಇಲಾಖೆಗಳ ಕಾರ್ಯನಿರ್ವಹಣೆಯಲ್ಲಿ ಶಿಸ್ತನ್ನು ತರಲು ಸಹಾಯಕವಾಗಲಿದೆ.

ವರ್ಗಾವಣೆ ಪ್ರಕ್ರಿಯೆಯಲ್ಲಿ ಉಂಟಾಗುವ ಅಸ್ಪಷ್ಟತೆಗಳನ್ನು ನಿವಾರಿಸಿ, ನೌಕರರಿಗೆ ನ್ಯಾಯ ದೊರಕುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

- Advertisement -

Related news

error: Content is protected !!