ಕಡಬ: ಶೀಘ್ರವಾಗಿ ಹಣ ಗಳಿಸುವ ಅವಕಾಶ ಹಾಗೂ ಕಡಿಮೆ ದರದಲ್ಲಿ ಹೆಚ್ಚಿನ ಬೆಲೆಯ ವಸ್ತುಗಳನ್ನು ನೀಡುವುದಾಗಿ ಆಮಿಷವೊಡ್ಡಿ, ಜನರನ್ನು ಯೋಜನೆಗೆ ಸೇರಿಸಿದರೆ ಕಮಿಷನ್ ನೀಡುವುದಾಗಿ ಭರವಸೆ ನೀಡಿ ಅಕ್ರಮವಾಗಿ ಹಣಪರಿಚಲನೆ ಯೋಜನೆ ನಡೆಸುತ್ತಿದ್ದ ಆರೋಪದ ಮೇಲೆ ಕಡಬ ಪೊಲೀಸರು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಡಬ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಹಾವೇರಿ ಮೂಲದ KINGS Bazaar ಸಂಸ್ಥೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸ್ವೀಕರಿಸಿ ನಿಷೇಧಿತ ಹಣಪರಿಚಲನೆ ಯೋಜನೆ ನಡೆಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಕೊಕ್ಕಡ ನಿವಾಸಿಗಳಾದ ಸುಬ್ರಹ್ಮಣ್ಯ ಶಗ್ರಿತ್ತಾಯ (50), ಗುರುಮೂರ್ತಿ (54), ಕಡಬ ಬಿಳಿನೆಲೆ ನಿವಾಸಿಗಳಾದ ಸುರೇಶ್ ಆರ್.ಎಸ್. (55), ಕಿರಣ್ ಕುಮಾರ್ (21), ಶ್ರೀನಾಥ್ (48), ಕಡಬ ಕೌಕ್ರಾಡಿ ನಿವಾಸಿ ಬಾಲಕೃಷ್ಣ ಪಿ.ಹೆಚ್. (42) ಹಾಗೂ ಪುತ್ತೂರು ನಿವಾಸಿ ಸಂದೇಶ್ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Prize Chits and Money Circulation Schemes (Banning) Act, 1978ರ ಕಲಂ 4, 5 ಮತ್ತು 6ರ ಅಡಿಯಲ್ಲಿ ಕಡಬ ಠಾಣಾ ಅ.ಕ್ರ. 100/2026ರಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








