
ಮಂಗಳೂರು: ಹಿಂದೂ ಹೆಣ್ಣುಮಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ‘ಪುತ್ತೂರು ಚಲೋ’ ಕಾರ್ಯಕ್ರಮ ಆಯೋಜಿಸಿರುವವರಿಗೆ, ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನಿಂದ ವಂಚನೆಗೊಳಗಾಗಿದ್ದಾರೆ ಎನ್ನಲಾದ ಯುವತಿಗೆ ನ್ಯಾಯ ಕೊಡಿಸುವ ನೈತಿಕತೆ ಇಲ್ಲ ಎಂದು ನಾಯಕಿ ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ತಾಕತ್ತು ಮತ್ತು ನೈತಿಕತೆ ಇದ್ದರೆ ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್ರಿಂದ ವಂಚನೆಗೊಳಗಾಗಿದ್ದಾರೆ ಎನ್ನಲಾದ ಯುವತಿಯನ್ನು ಅವರೊಂದಿಗೆ ಮದುವೆ ಮಾಡಿಸಿ” ಎಂದು ಸವಾಲು ಹಾಕಿದರು.ಕೃಷ್ಣ ಜೆ. ರಾವ್ರಿಂದ ವಂಚನೆಗೊಳಗಾದ ಯುವತಿ ಹಾಗೂ ಆಕೆಯ ಕುಟುಂಬ ಪುತ್ತೂರಿನ ಪ್ರಮುಖ ನಾಯಕರ ಮನೆಮನೆಗೆ ತೆರಳಿ ನ್ಯಾಯಕ್ಕಾಗಿ ಮನವಿ ಮಾಡಿತ್ತು.
ಆದರೆ ಆ ಸಂದರ್ಭದಲ್ಲಿ ಯಾರೊಬ್ಬರೂ ಬೆಂಬಲ ನೀಡಿಲ್ಲ. ಇದೀಗ ರಾಜಕೀಯ ಉದ್ದೇಶಕ್ಕಾಗಿ ಸಣ್ಣ ವಿಚಾರವನ್ನು ದೊಡ್ಡದಾಗಿ ಬಿಂಬಿಸಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.“ಯಾವುದೇ ಹೆಣ್ಣಿಗೆ ಅನ್ಯಾಯವಾದರೂ ನಾನು ಅವರ ಪರವಾಗಿ ನಿಲ್ಲುತ್ತೇನೆ. ಪೂಜಾಗೆ ಇನ್ನೂ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ನ್ಯಾಯಾಲಯದ ಮೂಲಕ ಹಣ ಸಿಗುತ್ತಿದೆ. ಆದರೆ ಇಲ್ಲಿ ಹಣ ಮುಖ್ಯವಲ್ಲ. ಆಕೆಯ ಜೀವನ ಹಾಳಾಗಿದೆ, ಮಗುವಿನ ಭವಿಷ್ಯವೂ ಹಾಳಾಗಿದೆ. ಆಕೆಗೆ ಮದುವೆಯ ಮೂಲಕ ನ್ಯಾಯ ಸಿಗಬೇಕು” ಎಂದು ಪ್ರತಿಭಾ ಕುಳಾಯಿ ಹೇಳಿದರು.
‘ಪುತ್ತೂರು ಚಲೋ’ ನಡೆಸುತ್ತಿರುವವರು ಮೊದಲು ಈ ಪ್ರಕರಣವನ್ನು ಪರಿಹರಿಸಲಿ. ಅದಾದ ಬಳಿಕವೇ ಇತರ ವಿಚಾರಗಳ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇದೆ ಎಂದು ಅವರು ಹೇಳಿದರು.“ಪ್ರತಿಭಟನಾಕಾರರು ಪುತ್ತೂರು ಚಲೋ ಬಳಿಕ ಜಗನ್ನಿವಾಸ್ ಅವರ ಮನೆಗೆ ಬಂದು ಪ್ರತಿಭಟನೆ ನಡೆಸುವುದಾದರೆ, ನಾನು ಆ ಪ್ರತಿಭಟನೆಗೆ ಬೆಂಬಲ ನೀಡುತ್ತೇನೆ. ಆದರೆ ಪೂಜಾಗೆ ನ್ಯಾಯ ಸಿಗದೆ ಪುತ್ತೂರಿನವರು ಹಿಂದೂ ಹೆಣ್ಣುಮಗಳ ಪರವಾಗಿ ಮಾತನಾಡುವ ನೈತಿಕತೆ ಹೊಂದಿಲ್ಲ. ತಾಕತ್ತಿದ್ದರೆ ಕೃಷ್ಣ ಜೆ. ರಾವ್ರಿಂದ ಆಕೆಗೆ ಮದುವೆ ಮಾಡಿಸಿ” ಎಂದು ಅವರು ಸವಾಲು ಹಾಕಿದರು.
ಜಿಲ್ಲಾಧಿಕಾರಿ ಸರ್ಕಾರಿ ನಿವಾಸದ ಬೋರ್ಡ್ ವಿವಾದ ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಸರ್ಕಾರಿ ನಿವಾಸದಲ್ಲಿ ಅವರ ಪತ್ನಿಯ ಹೆಸರಿನ ಬೋರ್ಡ್ ಹಾಕಿರುವ ವಿಚಾರವನ್ನೂ ಪ್ರತಿಭಾ ಕುಳಾಯಿ ಪ್ರಸ್ತಾಪಿಸಿದರು.ಸರ್ಕಾರಿ ನಿವಾಸದಲ್ಲಿ ಆ ಹುದ್ದೆಗೆ ಸಂಬಂಧಪಡದ ವ್ಯಕ್ತಿಯ ಹೆಸರನ್ನು ಹಾಕಲು ಅವಕಾಶವಿಲ್ಲ. ಜಿಲ್ಲಾಧಿಕಾರಿಯ ಹೆಸರನ್ನು ಮಾತ್ರ ಹಾಕಲು ಅವಕಾಶವಿದ್ದು, ಪತ್ನಿಯ ಹೆಸರಿನ ಬೋರ್ಡ್ ಹಾಕಿರುವುದು ನಿಯಮಬಾಹಿರ ಎಂದು ಅವರು ಆರೋಪಿಸಿದರು.ಈ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿಗೂ ಇ-ಮೇಲ್ ಮೂಲಕ ದೂರು ಸಲ್ಲಿಸಿರುವುದಾಗಿ ತಿಳಿಸಿದರು.
“ಜಿಲ್ಲಾಧಿಕಾರಿಗಳಿಗೆ ಕಾನೂನಿನ ಅರಿವು ಇದ್ದು, ತಪ್ಪನ್ನು ಸರಿಪಡಿಸುತ್ತಾರೆ ಎಂದು ಒಂದು ವಾರ ಕಾಯುತ್ತಿದ್ದೇನೆ. ಆದರೆ ಈ ವಿಚಾರದಲ್ಲಿ ಉದ್ಧಟತನ ತೋರಿಸಿದ್ದಾರೆ. ಒಂದು ವಾರದ ಬಳಿಕ ಕಾನೂನು ಪ್ರಕಾರ ಬೋರ್ಡ್ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರತಿಭಾ ಕುಳಾಯಿ ಎಚ್ಚರಿಕೆ ನೀಡಿದರು.








