ಲಂಚ ಸ್ವೀಕರಿಸುತ್ತಿದ್ದ ವೇಳೆ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಅವರು ಲಂಚವಾಗಿ ಸ್ವೀಕರಿಸಿದ 5,000 ರೂ. ಹಣವನ್ನು ಜಗಿದು ನುಂಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಿಯೋಜಿಸಲಾಗಿದ್ದ ಕಂದಾಯ ಇಲಾಖೆಯ ಅಧಿಕಾರಿ ಗಜೇಂದ್ರ ಸಿಂಗ್ ಲಂಚದ ಹಣವನ್ನು ಜಗಿದು ನುಂಗಿರುವ ವ್ಯಕ್ತಿ. ಭೂ ಪ್ರಕರಣದ ದೂರುದಾರರಾದ ಚಂದನ್ ಸಿಂಗ್ ಲೋಧಿ ಅವರಿಗೆ ಗಜೇಂದ್ರ ಸಿಂಗ್ 5,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಲೋಧಿ ಲೋಕಾಯುಕ್ತ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದ ಜಬಲ್ಪುರದ ಲೋಕಾಯುಕ್ತ ಪೊಲೀಸರ ತಂಡ ಗಜೇಂದ್ರ ಸಿಂಗ್ ಖಾಸಗಿ ಕಚೇರಿಗೆ ತಲುಪಿದೆ. ಗಜೇಂದ್ರ ಸಿಂಗ್ ಲೋಧಿ ಅವರಿಂದ ಲಂಚವನ್ನು ಸ್ವೀಕರಿಸುತ್ತಲೇ ದಾಳಿ ನಡೆಸಿ ಕಂದಾಯ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಆದರೆ ಈ ವೇಳೆ ಗಜೇಂದ್ರ ಸಿಂಗ್ ತಾನು ಸ್ವೀಕರಿಸಿದ 5,000 ರೂ. ಮೊತ್ತದ ಲಂಚವನ್ನು ಜಗಿದು ನುಂಗಿದ್ದಾರೆ.
ತಕ್ಷಣವೇ ಗಜೇಂದ್ರ ಸಿಂಗ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸಾಕಷ್ಟು ಪ್ರಯತ್ನಗಳ ನಂತರ ಲಂಚದ ನೋಟುಗಳನ್ನು ಅವರ ಬಾಯಿಯಿಂದ ತಿರುಳಿನ ರೂಪದಲ್ಲಿ ಹೊರತೆಗೆಯಲಾಗಿದೆ. ಸದ್ಯ ಗಜೇಂದ್ರ ಸಿಂಗ್ ಆರೋಗ್ಯ ಸ್ಥಿರವಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.