ಬೆಳ್ತಂಗಡಿ: ಐಎಎಸ್ ಅಧಿಕಾರಿಗಳ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ನಾಪತ್ತೆಯಾಗಿದ್ದ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಗಿರಿರಾಜ್ ಧರ್ಮಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಾಪತ್ತೆಯಾಗಿದ್ದರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನೇಕ ಕಡೆ ಶೋಧವನ್ನು ನಡೆಸಿ ಎಲ್ಲಾ ಪೊಲೀಸ್ ಕೇಂದ್ರಗಳಿಗೂ ಸಂದೇಶವನ್ನು ರವಾನಿಸಿ ತನಿಖೆಯನ್ನು ನಡೆಸುತ್ತಿದ್ದರು ಹಾಗೂ ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಇವರು ಕಾಣೆಯಾಗಿದ್ದ ಕುರಿತು ವಿಷಯ ಹರಿದಾಡಿತ್ತು.
ಸೆಪ್ಟೆಂಬರ್ 28 ರಂದು ಗಿರಿರಾಜ್ ರವರು ಕಚೇರಿಯ ಕಾರ್ಯದ ಒತ್ತಡದಿಂದ ಆತ್ಮಹತ್ಯೆ ಶರಣಾಗುವುದಾಗಿ ಹಾಗೂ ತನ್ನ ಸಾವಿಗೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕಾರಣ ಎಂದು ಕಚೇರಿ ಸಿಬ್ಬಂದಿಗಳ ಗ್ರೂಪ್ ಗೆ ಸಂದೇಶವನ್ನು ಕಳುಹಿಸಿ ಬೆಳ್ಳಂಬೆಳಗ್ಗೆ ನಾಪತ್ತೆಯಾಗಿದ್ದರು.
ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ ಗಿರಿರಾಜ್ ಧರ್ಮಸ್ಥಳದ ಕಟ್ಟೆಯೊಂದರಲ್ಲಿ ಅಸ್ವಸ್ಥರಾಗಿ ಮಲಗಿದ್ದರು, ಅವರನ್ನು ಸ್ಥಳೀಯರು ಗುರುತು ಹಿಡಿದು ಪಿಎಸ್ಐ ಕೃಷ್ಣಕಾಂತ್ ರವರಿಗೆ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಅಸ್ವಸ್ತರಾಗಿದ್ದ ಗಿರಿರಾಜ್ ನನ್ನು ಉಪಚರಿಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ಲಭಿಸಿದೆ.