




ಅಕ್ರಮ ಧ್ವಜಸ್ತಂಭ ತೆಗೆಯಲು ತಂದಿದ್ದ ಜೆಸಿಬಿ ಯಂತ್ರದ ಮೇಲೆ ದಾಳಿ ನಡೆಸಿ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಮುಖಂಡ ಅಮರ್ ಪ್ರಸಾದ್ ರೆಡ್ಡಿ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರ ಚೆನ್ನೈ ನಿವಾಸದ ಹೊರಗಿಂದ ಧ್ವಜಸ್ತಂಭವನ್ನು ತೆಗೆಯಬೇಕಿತ್ತು. ಈ ಹಿನ್ನೆಲೆ ಬಂದ ಆದೇಶದ ಮೇರೆಗೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾದ ವೇಳೆ ಬಿಜೆಪಿ ಮುಖಂಡ ಅಮರ್ ಪ್ರಸಾದ್ ರೆಡ್ಡಿ ಜೆಸಿಬಿ ಮೇಲೆ ದಾಳಿ ನಡೆಸಿದರು. ಈ ಹಿನ್ನೆಲೆ ಅವರನ್ನು ಪೊಲೀಸ್ ಅಧಿಕಾರಿಗಳು ಸದ್ಯ ಬಂಧನಕ್ಕೆ ಒಳಪಡಿಸಿದ್ದಾರೆ.
ತಾಂಬ್ರಮ್ ಪೊಲೀಸರ ಪ್ರಕಾರ, ಅಣ್ಣಾಮಲೈ ಅವರ ಮನೆಯ ಕಾಂಪೌಂಡ್ ಗೋಡೆಯ ಹೊರಗಿದ್ದ 45 ಅಡಿ ಧ್ವಜ ಸ್ತಂಭವನ್ನು ಸ್ಥಾಪಿಸುವ ಮೊದಲು ಗ್ರೇಟರ್ ಚೆನ್ನೈ ಕಾರ್ಪೊರೇಷನ್ನಿಂದ ಯಾವುದೇ ಅನುಮತಿಯನ್ನು ಕೇಳಲಾಗಿಲ್ಲ. ಈ ಧ್ವಜ ಸ್ತಂಭವು ಹೈವೋಲ್ಟೇಜ್ ವಿದ್ಯುತ್ ಲೈನ್ಗಳಿಗೆ ಅಪಾಯಕಾರಿಯಾಗಿ ಸಮೀಪದಲ್ಲಿದೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು.
ನಂತರ ಅದನ್ನು ತೆಗೆದುಹಾಕಲು ಪಾಲಿಕೆ ಮತ್ತು ಪೊಲೀಸರು ನಿರ್ಧರಿಸಿದ್ದರು. ಸ್ಥಳಕ್ಕೆ ಬಂದ ಅಮರ್ ಪ್ರಸಾದ್ ರೆಡ್ಡಿ ಸೇರಿದಂತೆ ಇತರೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಅಮರ್ ಅವರನ್ನು ಬಂಧಿಸಿದ ಬೆನ್ನಲ್ಲೇ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಇದನ್ನು ಖಂಡಿಸಿದ್ದಾರೆ. ಹಲವು ಬಾರಿ ಮಾಡಿದ ವಿನಂತಿಗಳ ಹೊರತಾಗಿಯೂ, ಅವರು ಸರ್ಕಾರಿ ಅಧಿಕಾರಿಗಳೊಂದಿಗೆ ಜಗಳವಾಡುತ್ತಿದ್ದರು. ತದನಂತರ ಅವರಲ್ಲಿ ಕೆಲವರನ್ನು ಬಂಧಿಸಲಾಯಿತು ಮತ್ತು ಜಾಮೀನಿನ ಮೇಲೆ ಬಿಡಲಾಯಿತು. ರೆಡ್ಡಿ ಬಂಧನವಲ್ಲದೆ, ಪ್ರಕರಣದಲ್ಲಿ ಆರು ಮಂದಿಯ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಅವರಲ್ಲಿ ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.