

ಎಂಜಿನಿಯರಿಂಗ್ ಮುಗಿಸಿದ್ದ ಆ ಜೋಡಿ ಮದುವೆಯಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅದೇನ್ ಆಯ್ತೋ ಗೊತ್ತಿಲ್ಲ. ಕೈಯಲಿದ್ದ ಕೆಲಸ ಬಿಟ್ಟವರೇ ಕೋಟಿ ಕೋಟಿ ಹಣ ಮಾಡಬೇಕು ಅಂತಾ ಡಿಸೈಡ್ ಮಾಡಿದ್ರು. ಪರಿಣಾಮ ಗಂಡ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾದರೆ, ಹೆಂಡತಿ ತಲೆಮರೆಸಿಕೊಂಡಿದ್ದಾರೆ.
ಬೆಂಗಳೂರಿನ ಜೆಪಿ ನಗರ ನಿವಾಸಿಗಳಾದ ಸೌಮ್ಯ ಮತ್ತು ಪ್ರದೀಪ್ ಅನ್ನೋರು ಎಂಜಿನಿಯರಿಂಗ್ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೈತುಂಬಾ ಸಂಬಳ, ಹೊಸ ಲೈಫ್ ಚೆನ್ನಾಗಿಯೇ ಇತ್ತು. ಆದರೆ ಅದೊಂದು ದಿನ ದಂಪತಿ ಕೋಟಿ ಕೋಟಿ ಹಣ ಮಾಡೋ ಆಸೆಯಲ್ಲಿ ಕೈಯಲ್ಲಿದ್ದ ಕೆಲಸ ಬಿಟ್ಟು ಪ್ರಮ್ಯಾ ಹೆಸರಿನ ಕಂಪನಿಯೊಂದನ್ನು ಓಪನ್ ಮಾಡಿದ್ದು,ಮೂವತ್ತು ಪರ್ಸೆಂಟ್ ಬಡ್ಡಿ ನೀಡುವ ಬಗ್ಗೆ ಜಾಹೀರಾತು ನೀಡಿ. ಜನರಿಂದ ಹತ್ತು ಸಾವಿರದಿಂದ ಹದಿನೈದು ಲಕ್ಷದ ತನಕ ಪ್ರಮ್ಯಾ ಇಂಟರ್ ನ್ಯಾಷನಲ್ಗೆ ದುಡ್ಡು ಹಾಕಿಸಿಕೊಳ್ಳಲು ಶುರುಮಾಡಿದರು.
ಜಾಹೀರಾತು ನೋಡಿ ಅಧಿಕ ಬಡ್ಡಿ ಆಸೆಗೆ ಬಿದ್ದ ಜನರು ಸಾವಿರದಿಂದ ಲಕ್ಷಗಳವರೆಗೆ ಹಣ ಹೂಡಿಕೆ ಮಾಡಿದರು. ಮೊದಲ ಆರು ತಿಂಗಳು ಕೊಟ್ಟ ಮಾತಿನಂತೆ ಮೂವತ್ತು ಪರ್ಸೆಂಟ್ ಹಣ ವಾಪಸ್ ಮಾಡಿದ್ದು, ಈ ವಿಚಾರ ಒಬ್ಬರಿಂದ ಒಬ್ಬರ ಕಿವಿಗೆ ಬಿದ್ದು, ಎರಡು ವರ್ಷದಲ್ಲಿ ಸುಮಾರು 700ಕ್ಕೂ ಹೆಚ್ಚು ಜನರು ಸುಮಾರು ಮೂವತ್ತು ಕೋಟಿಯಷ್ಟು ಹಣ ಹೂಡಿಕೆ ಮಾಡಿದರು. ದುಡ್ಡು ಜಾಸ್ತಿ ಆಗ್ತಿದ್ದಂತೆ ಈ ದಂಪತಿ ನಾಟ್ ರಿಚಬಲ್ ಆಗೋಕೆ ಶುರುಮಾಡಿದ್ದು, ಈ ವಿಚಾರ ತಿಳಿದ ಸಿಸಿಬಿ ಅರ್ಥಿಕ ಅಪರಾಧ ದಳ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ತನಿಖೆಗೆ ಇಳಿದಿದ್ರು. ಪ್ರಾಥಮಿಕ ತನಿಖೆಯಲ್ಲಿ ಪ್ರದೀಪ್ ಮತ್ತು ಸೌಮ್ಯರ ಬ್ಯಾಂಕ್ ಡಿಟೇಲ್ ಕಲೆಕ್ಟ್ ಮಾಡಿದ ವೇಳೆ ಎರಡು ವರ್ಷದಲ್ಲಿ ಸುಮಾರು ಎಪ್ಪತ್ತು ಕೋಟಿ ಹಣದ ವ್ಯವಹಾರ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಪರಿಣಾಮ ಪ್ರಮ್ಯಾ ಇಂಟರ್ ನ್ಯಾಷನಲ್ ಮಾಲೀಕ ಪ್ರದೀಪ್ ಬಂಧನ ಮಾಡಿದರು. ವಿಚಾರ ತಿಳಿದ ಪತ್ನಿ ಸೌಮ್ಯ ನಾಪತ್ತೆಯಾಗಿದ್ದಾರೆ.
ಸಿಸಿಬಿ ಪೊಲೀಸರ ತನಿಖೆ ಮುಂದುವರಿದಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈ ಟೆಕ್ಕಿ ದಂಪತಿ ವಂಚನೆ ಕೇಸ್ಗಳು ಹೆಚ್ಚಾಗುತ್ತಿವೆ. ಶಾಟ್ ಕಟ್ ನಲ್ಲಿ ದುಡ್ಡು ಮಾಡೋಕೆ ಹೋದ ದಂಪತಿ ಜೈಲು ಪಾಲಾಗಿದ್ರೆ, ಅಧಿಕ ಬಡ್ಡಿ ಆಸೆಗೆ ಬಿದ್ದ ಜನರು ಹಣ ಕಳೆದುಕೊಂಡು ಮುಖ ಮುಖ ನೋಡುವಂತಾಗಿದೆ.