ಮಂಗಳೂರು: ನಟೋರಿಯಸ್ ರೌಡಿ ಆಕಾಶಭವನ ಶರಣ್ ಮಂಗಳೂರು ನಗರ ಅಪರಾಧ ಪತ್ತೆದಳ ಪೊಲೀಸರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿ ಪರಾರಿಯಾದ ಘಟನೆ ನಡೆದಿದೆ.
ಜ. 2ರಂದು ರಾತ್ರಿ ಆಕಾಶ ಭವನ ಶರಣ್ ನಗರದ ಮೇರಿಹಿಲ್ನಲ್ಲಿ ಕಾರಿನಲ್ಲಿದ್ದಾಗ ಸಿಸಿಬಿ ಪೊಲೀಸರು ಆತನ ಕಾರನ್ನು ಅಡ್ಡಗಟ್ಟಲು ಮುಂದಾದರು. ಈ ವೇಳೆ ಪೊಲೀಸರ ವಾಹನಕ್ಕೆ ಕಾರು ಢಿಕ್ಕಿಪಡಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಅಕ್ಟೋಬರ್ನಲ್ಲಿ ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ರೇಣುಕಾಪ್ರಸಾದ್ ಸೇರಿ 5 ಮಂದಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸುಪಾರಿ ಪಡೆದು ಕೊಲೆ ಕೃತ್ಯ ನಡೆಸಿದ್ದ ಆಕಾಶ ಭವನ ಶರಣ್ ಕೂಡ ದೋಷಿಯಾಗಿದ್ದ. ಆದರೆ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದರಿಂದ ಶಿಕ್ಷೆ ಪ್ರಕಟವಾಗಿರಲಿಲ್ಲ. ಉಳಿದ ಐದು ಮಂದಿ ಜೈಲು ಸೇರಿದ್ದರೆ, ರೌಡಿ ಶೀಟರ್ ಶರಣ್ ತಲೆಮರೆಸಿಕೊಂಡಿದ್ದ. ಈತನ ಮೇಲೆ ಮಂಗಳೂರು ಮತ್ತು ಉಡುಪಿಯಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ಹಫ್ತಾ ಸಹಿತ 21 ಕೇಸುಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.