



ಒಂಟೆ ಸವಾರಿ ಮಾಡಿದ್ದ ಮೂವರು ಮಕ್ಕಳು ನಿನ್ನೆ ಮನೆಯಿಂದ ಕಾಣೆಯಾಗಿದ್ದು, ಇಂದು ಶವವಾಗಿ ಪತ್ತೆ ಆದ ಘಟನೆ ವಿಜಯಪುರದ ಚಾಬಕಸಾಬ್ ದರ್ಗಾದ ಬಳಿ ನಡೆದಿದೆ.
ವಿಜಯನಗರದ ಇಂಡಿ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದಲ್ಲಿ ಶವಗಳು ಪತ್ತೆಯಾಗಿದ್ದು ಮೃತರನ್ನು ಗದಗ ಮೂಲದ ಅನುಷ್ಕಾ ಅನೀಲ ದಹಿಂಡೆ (9) ವಿಜಯ ಅನಿಳ ದಹಿಂಡೆ (7) ಮತ್ತು ವಿಜಯಪುರ ಮೂಲದ ಮಿಹಿರ್ ಶ್ರೀಕಾಂತ ಜಾನಗೌಳಿ (7) ಎಂದು ಗುರುತಿಸಲಾಗಿದೆ.
ಗದಗ ಮೂಲದ ಅನುಷ್ಕಾ ಹಾಗೂ ವಿಜಯ ಬೇಸಿಗೆ ರಜೆಗಾಗಿ ವಿಜಯಪುರದಲ್ಲಿರುವ ಮಾವನ ಮನೆಗೆ ಬಂದಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ವಿಜಯಪುರದ ಚಾಬಕಸಾಬ್ ದರ್ಗಾದ ಬಳಿಯ ಮನೆಯ ಮುಂದೆ ಒಂಟೆ ಸವಾರಿ ಮಾಡಿದ್ದಾರೆ. ನಂತರ ಒಂಟೆಗಳನ್ನು ಹುಡುಕಿಕೊಂಡು ಮನೆಯಿಂದ ಹೋಗಿದ್ದರು.
ಮಕ್ಕಳು ಮನೆಯಿಂದ ಆಚೆ ಹೋಗುವ ವಿಡಿಯೋ ಕೆಲ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಬಹಳ ಸಮಯವಾದರೂ ಮನೆಗೆ ಮಕ್ಕಳು ಬಾರದ ಕಾರಣ ಮನೆಯವರು ಹುಡುಕಾಡಿದ್ದಾರೆ. ಸಂಜೆ ಎಪಿಎಂಸಿ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದಾರೆ. ನಿನ್ನೆಯಿಂದಲೇ ಕುಟುಂಬಸ್ಥರು ಪೊಲೀಸರು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಇಂದು ಮಧ್ಯಾಹ್ನದ ವೇಳೆ ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದ ನೀರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಇಂದು ಮಕ್ಕಳ ಶವಗಳು ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದಲ್ಲಿ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ರೋಧನೆ ಮುಗಿಲು ಮಟ್ಟಿದೆ. ಇದೇ ವೇಳೆ ಯುಜಿಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಎದುರು ಮೃತ ಮಕ್ಕಳ ಪೋಷಕರಿಂದ ಪ್ರತಿಭಟನೆ ಮಾಡಿದ್ದರು. ಸಂಸ್ಕರಣಾ ಘಟಕದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ತ್ಯಾಜ್ಯ ಘಟಕಕ್ಕೆ ತಡೆಗೋಡೆ ಅಥವಾ ಬೇಲಿ ಹಾಕಿಲ್ಲ. ಹೀಗಾಗಿ ಮೂವರು ಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟಿವೆ. ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು ಇದಕ್ಕೆ ಕಾರಣವೆಂದು ಮಕ್ಕಳ ಕುಟುಂಬಸ್ಥರು ಆರೋಪಿಸಿದ್ದಾರೆ.