

ವಿಟ್ಲ: ಮಳೆಗಾಲ ಬಂತೆಂದರೆ ಸಾಕು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿಟ್ಲ ಮಂಗಳೂರು ಪ್ರಮುಖ ರಸ್ತೆ ಸಮುದ್ರವಾಗಿ ಬದಲಾಗುತ್ತದೆ. ಮಳೆಯ ನೀರು ಹಾದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಬದಿ ಸೇರಿದಂತೆ ರಸ್ತೆಯುದ್ದಕ್ಕೂ ಮಳೆನೀರು ನಿಂತು ಆಚೆ ವಾಹನ ಸವಾರರಿಗೂ ಸಂಚರಿಸುವಂತಿಲ್ಲ, ಈಚೆ ಪಾದಾಚಾರಿಗಳಿಗೂ ಕಾಲ್ನಡಿಗೆಯಲ್ಲಿ ಹೋಗುವಂತಿಲ್ಲ.



ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ, ಮಳೆಗಾಲ ಬಂತೆಂದರೆ ಈ ರಸ್ತೆಯಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಇಂದು ಬೆಳಗ್ಗಿನಿಂದ ಸುರಿಯುತ್ತಿರುವ ಹನಿ ಹನಿ ಮಳೆಗೆ ಈ ರಸ್ತೆ ಜಲಾವೃತಗೊಂಡಿದ್ದು, ರಸ್ತೆಯ ಮಧ್ಯಭಾಗದಲ್ಲಿ ಜನರು ನಡೆದಾಡುವ ಪರಿಸ್ಥಿತಿ ಎದುರಾಗಿದೆ. ವಿಟ್ಲ ಮುಖ್ಯ ಪೇಟೆಯಿಂದ ಬೊಬ್ಬೆಕೇರಿ ಬಳಿ ಹಲವಾರು ಪದಾಚಾರಿಗಳು ದಿನ ಪ್ರತಿ ಇದೇ ರಸ್ತೆಯಲ್ಲಿ ಹಾದು ಹೋಗ್ತಾರೆ. ಇಂದಿನ ಮಳೆಗೆ ರಸ್ತೆಯ ಸುತ್ತ ನೀರು, ಮಧ್ಯದಲ್ಲಿ ಸ್ವಲ್ಪ ಜಾಗ ಖಾಲಿಯಾಗಿ ದ್ವೀಪದಂತೆ ಆವೃತವಾಗಿದ್ದು, ವಾಹನ ಸವಾರರು ಸೇರಿದಂತೆ ಪಾದಾಚಾರಿಗಳು ಪರದಾಡುವಂತ ಸ್ಥಿತಿ ಎದುರಾಗಿದೆ. ಪಾದಾಚಾರಿಗಳು ನಡುರಸ್ತೆಯಲ್ಲೇ ಹಾದು ಹೋಗುವ ಪರಿಸ್ಥಿತಿ ಎದುರಾಗಿದ್ದು, ಪಾದಾಚಾರಿಗಳು ರಸ್ತೆ ದಾಟುವ ತನಕ ವಾಹನ ಸವಾರರು ಕಾಯುವಂತಾಗಿದೆ. ಈ ಸಮಸ್ಯೆಗಳಿಗೆ ಹೊಣೆ ಯಾರು? ಇದಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲವೇ..? ಪಟ್ಟಣ ಪಂಚಾಯತ್ನ ನಿರ್ಲಕ್ಷ್ಯತನ ಕಾರಣವೇ? ಎಂಬುವುದು ವಾಹನ ಸವಾರರ ಹಾಗೂ ಸಾರ್ವಜನಿಕರ ಆಕ್ರೋಶವಾಗಿದೆ.


