

ದಕ್ಷಿಣ ಕನ್ನಡ, ಹಾಸನ ಮತ್ತು ಕೊಡಗು ಜಿಲ್ಲೆಯ ಮಧ್ಯದಲ್ಲಿರುವ ಪ್ರಸಿದ್ದ ಪ್ರವಾಸಿ ತಾಣ ಬಿಸಿಲೆ ಘಾಟಿಯ ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಸ್ಥಳೀಯ ಜೀಪು ಚಾಲಕರನ್ನು ಬಂಧಿಸಲಾಗಿದೆ.
ಪಟ್ಲ ಬೆಟ್ಟದಲ್ಲಿ ಸ್ಥಳೀಯ ಜೀಪು ಚಾಲಕರು ಬೈಕರ್ಸ್ ಗಳಿಗೆ ಹಲ್ಲೆ ನಡೆಸಿದ್ದು ಇದೀಗ ನಾಲ್ವರು ಜೀಪು ಚಾಲಕರ ಬಂಧಿಸಿ ಮತ್ತು ಅನಧಿಕೃತವಾಗಿ ಅಪಾಯಕಾರಿ ರೀತಿ ಸಂಚರಿಸುತ್ತಿದ್ದ ಜೀಪುಗಳನ್ನು ಜೂ.25 ರಂದು ಹಾಸನ ಎಸ್ಪಿ ಮಹಮ್ಮದ್ ಸುಜೀತರವರು ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ.
ಇದೀಗ ಆರೋಪಿಗಳ ಬಂಧನವಾಗುತ್ತಿದ್ದಂತೆ ಸ್ಥಳೀಯ ಸಕಲೇಶಪುರ ತಾಲ್ಲೂಕಿನ ವನಗೂರು ಗ್ರಾಮ ಪಂಚಾಯತ್ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಜಾಗದಲ್ಲಿ ನಾಮಫಲಕವೊಂದನ್ನು ಪ್ರಕಟಿಸಿದೆ. ಈ ಪ್ರವಾಸಿ ತಾಣಕ್ಕೆ ಪ್ರವಾಸಕ್ಕೆ ಸ್ಥಳೀಯರ ವಾಹನಗಳನ್ನು ಹೊರತುಪಡಿಸಿ ಪ್ರವಾಸಿಗರ ವಾಹನಗಳಿಗೆ ಪ್ರವೇಶವಿಲ್ಲ ಎಂದು ಪ್ರವೇಶವಾಗುವ ನಾಮಫಲಕ ಪ್ರಕಟಿಸಿದೆ ಎಂದು ಬೈಕರ್ಸ್ ಗಳೊಬ್ಬರು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಅರಣ್ಯ ಇಲಾಖೆಯ ಆಸ್ತಿಯಾದ ಪಟ್ಲಬೆಟ್ಟದಲ್ಲಿ ಗ್ರಾಮ ಪಂಚಾಯತ್ ಹೇಗೆ ನಾಮಫಲಕ ಪ್ರಕಟಿಸಿದೆ ಎಂದು ಈ ಪೋಸ್ಟ್ ಗೆ ಸಾವಿರಾರು ಜನ ಕಮೆಂಟ್ ಮೂಲಕ ಪ್ರಶ್ನಿಸಿದ್ದಾರೆ. ಈ ಮೊದಲು ಹಲವು ಪ್ರವಾಸಿಗರು ತಮ್ಮ ವಾಹನದಲ್ಲಿ ಬೆಟ್ಟ ಹತ್ತಲು ಹೋದವರಿಗೆ ಸ್ಥಳೀಯ ಜೀಪು ಚಾಲಕರಿಂದ ಹಲ್ಲೆ ನಡೆದ ಬಗ್ಗೆ ಈಗಾಗಲೇ ಎಸ್ಪಿಗೆ ಮಾಹಿತಿ ದೊರಕಿದೆ. ಪ್ರವೇಶವಾಗುವ ಸ್ಥಳದಲ್ಲಿ ಶೀಘ್ರ ಪೊಲೀಸ್ ಸಿಬ್ಬಂದಿಯ ನೇಮಕ ಮಾಡುವುದಾಗಿ ಹಾಸನ ಎಸ್ಪಿ ಮಹಮ್ಮದ್ ಸುಜೀತರವರು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.