

ಪುತ್ತೂರು: ಟ್ಯಾಂಕರ್ ಮತ್ತು ತ್ರಿವೀಲರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ವಿಕಲ ಚೇತನ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನೆಹರುನಗರ ಮಂಜಲಪಡ್ಡು ಬಳಿಯ ಪೆಟ್ರೋಲ್ ಪಂಪ್ ಮುಂಭಾಗ ನಿನ್ನೆ ರಾತ್ರಿ ಸಂಭವಿಸಿದೆ.
ಮೃತರನ್ನು ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50) ಎಂದು ಗುರುತಿಸಲಾಗಿದೆ.
ಮಂಗಳೂರು ಕಡೆ ಹೋಗುತ್ತಿದ್ದ ಟ್ಯಾಂಕರ್ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವು ಗಾಯಗೊಂಡ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.
ವಿಶೇಷ ಚೇತನ ವ್ಯಕ್ತಿಯಾದ ಕಾರಣ ಅವರು ವಿಕಲಚೇತನರ ವಾಹನದಲ್ಲಿ ಸಂಚರಿಸುವಾಗ ಸೊಂಟಕ್ಕೆ ಮತ್ತು ವಾಹನಕ್ಕೆ ಬೆಲ್ಟ್ ಸಿಕ್ಕಿಸಿಕೊಂಡಿದ್ದರು, ಅಪಘಾತದ ನಂತರ ಈ ಬೆಲ್ಟ್ ನೊಂದಿಗೆ ಶಿವರಾಮರ ಮೃತದೇಹ ಸಿಕ್ಕಿಕೊಂಡಿದೆ. ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅರ್ಧ ಗಂಟೆ ಕಳೆದು ಪೊಲೀಸರು ಬಂದಾಗ ಮೃತದೇಹ ಬದಿಗೆ ಸರಿಸಲಾಯಿತು. ಅಷ್ಟರವರೆಗೂ ಮೃತದೇಹ ಅಪಘಾತ ನಡೆದ ಸ್ಥಳದಲ್ಲೇ ಇತ್ತು ಎಂದು ತಿಳಿದುಬಂದಿದೆ.
ಪುತ್ತೂರಿನ ಸಂಚಾರಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೇಸು ದಾಖಲಿಸಿದ್ದಾರೆ.