

ನೇಪಾಳ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುವ ವೇಳೆ ಶೌರ್ಯ ಏರ್ಲೈನ್ಸ್ ವಿಮಾನ ಪತನಗೊಂಡು 18 ಮಂದಿ ಪ್ರಯಾಣಿಕರು ಸಜೀವ ದಹನವಾದ ಘಟನೆ ನಡೆದಿದೆ.
ವಿಮಾನದಲ್ಲಿ ಪೈಲಟ್ ಸೇರಿ 19 ಮಂದಿ ಇದ್ದರು. ಸದ್ಯ ಐವರ ಮೃತದೇಹವನ್ನು ಹೊರತೆಗೆಯಲಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದೆ. ಶೌರ್ಯ ಏರ್ಲೈನ್ಸ್ ವಿಮಾನವು ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ವಿಮಾನದ ಪೈಲಟ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ದೇಶೀಯ ಶೌರ್ಯ ಏರ್ಲೈನ್ಗೆ ಸೇರಿದ ವಿಮಾನವು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾದ ಪೋಖರಾದ ರೆಸಾರ್ಟ್ ಪಟ್ಟಣಕ್ಕೆ ತೆರಳುತ್ತಿತ್ತು.
ಶೌರ್ಯ ಏರ್ಲೈನ್ಸ್ ವಿಮಾನವು ಇಬ್ಬರು ಸದಸ್ಯರನ್ನೊಳಗೊಂಡ ಸಿಬ್ಬಂದಿ ಮತ್ತು ಕಂಪನಿಯ 17 ಸಿಬ್ಬಂದಿಯನ್ನು ಪರೀಕ್ಷಾರ್ಥ ಉಡಾವಣೆಯಾಗಿ ಹೊತ್ತೊಯ್ಯುತ್ತಿತ್ತು. ಪತನಗೊಂಡ ವಿಮಾನದ ಪೈಲಟ್ನನ್ನು ರಕ್ಷಿಸಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಅಪಘಾತ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ನೇಪಾಳಿ ಪೊಲೀಸ್ ವಕ್ತಾರ ಡಾನ್ ಬಹದ್ದೂರ್ ಕರ್ಕಿ ತಿಳಿಸಿದ್ದಾರೆ.