



ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಎಫ್ಎಸ್ಎಲ್, ಮರಣೋತ್ತರ ಪರೀಕ್ಷೆಗಳು ಕೃತ್ಯಕ್ಕೆ ಸಾಕ್ಷ್ಯ ಹೇಳುತ್ತಿವೆ. ಕಳೆದೆರಡು ತಿಂಗಳಿನಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆಗೂ ತಯಾರಿ ನಡೆಸಿದ್ದಾರೆ. ಪ್ರಕರಣದ ತನಿಖೆಗಾಗಿ ಪೊಲೀಸರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ, ಸರ್ಕಾರದಿಂದ ಸರಿಯಾದ ಸಮಯಕ್ಕೆ ಆರ್ಥಿಕ ನೆರವು ಸಿಕ್ಕಿಲ್ಲ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಬಂಧನ ಆಗಿ 2 ತಿಂಗಳು ಕಳೆದೋಗಿದೆ. ದರ್ಶನ್ ಅಂಡ್ ಟೀಂಗೆ ನ್ಯಾಯಾಂಗ ಬಂಧನದ ಅವಧಿ ಕೂಡ ವಿಸ್ತರಣೆ ಆಗುತ್ತಲೇ ಸಾಗುತ್ತಿದೆ. ಪೊಲೀಸರು ತನಿಖೆ ಮುಂದುವರಿಸುತ್ತಲೇ ಬಂದಿದ್ದಾರೆ. ಈ ಮಧ್ಯೆ ಚಾರ್ಜ್ಶೀಟ್ ಸಲ್ಲಿಕೆಗೂ ಸಜ್ಜಾಗಿದ್ದಾರೆ. ಹತ್ಯೆ ಪ್ರಕರಣ ಬೆಳಕಿಗೆ ಬಂದ ಕೂಡಲೇ ತನಿಖೆಗಿಳಿದಿರುವ ಪೊಲೀಸರಿಗೆ ಇಲಾಖೆಯಿಂದ ಸೂಕ್ತ ನೆರವು ಸಿಕ್ಕಿಲ್ಲ ಎನ್ನಲಾಗಿದೆ. ಆರಂಭದಿಂದ ಇಲ್ಲಿಯವರೆಗೆ ಖರ್ಚು-ವೆಚ್ಚಗಳಿಗೆ ಪೊಲೀಸ್ ಅಧಿಕಾರಿಗಳೇ ತಮ್ಮ ಸ್ವಂತ ಹಣ ಭರಿಸಿದ್ದು ಕೈ ಖಾಲಿಯಾದಂತಾಗಿದೆ. ಪೊಲೀಸ್ ಇಲಾಖೆಯಿಂದ ಹಣಕಾಸಿನ ನೆರವು ಸಿಗದೇ ಇರೋದು ಮುಂದಿನ ತನಿಖೆ ಮೇಲೆ ಕಾರ್ಮೋಡ ಕವಿದಿದೆ.
ದರ್ಶನ್ ಕೇಸಿನಲ್ಲಿ ಸಾಕಷ್ಟು ಓಡಾಟ, ಕಂಪ್ಯೂಟರ್ ಸಾಧನಗಳು, ಹಾರ್ಡ್ಡಿಸ್ಕ್ ಹೀಗೆ ಹೆಚ್ಚೇ ಹಣ ಖರ್ಚಾಗಿದೆ. ತಮ್ಮ ಸ್ವಂತ ಹಣ ಖರ್ಚು ಮಾಡಿಕೊಂಡು ತನಿಖೆ ನಡೆಸಿರುವ ಪೊಲೀಸರು ಸರ್ಕಾರದಿಂದ ಸಹಾಯದ ಎದುರು ನೋಡುವಂತಾಗಿದೆ. ಸರ್ಕಾರದಿಂದ ಸಹಾಯ ಸಿಕ್ಕರಷ್ಟೇ ತನಿಖಾಧಿಕಾರಿಗಳಿಗೂ ಮನೋಬಲ ಹೆಚ್ಚಲಿದೆ.