


ಕಿರುಕುಳ ನೀಡುತ್ತಿದ್ದ ಗಂಡನ ನಡೆಗೆ ಬೇಸತ್ತು ಮಹಿಳೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಅಕ್ಷಯನಗರದಲ್ಲಿ ನಡೆದಿದೆ.
ಅನುಷಾ ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಬೆಂಕಿ ಕೆನ್ನಾಲಿಗೆ ಸುಟ್ಟು ಕರಕಲಾಗಿದ್ದ ಅನುಷಾ ಸಾವು-ಬದುಕಿನ ಮಧ್ಯೆ ಹೋರಾಡಿ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅನುಷಾ ಐದು ವರ್ಷಗಳ ಹಿಂದೆ ಶ್ರೀಹರಿ ಎಂಬಾತನ ಜತೆಗೆ ವಿವಾಹವಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗುವೂ ಇದೆ. ಈಕೆಯ ಪತಿ ಶ್ರೀಹರಿ ಮೊಬೈಲ್ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಹೀಗೆ ಸಹಕರಿಸು ಎಂದು ಟಾರ್ಚರ್ ಕೊಡುತ್ತಿದ್ದ. ಅಲ್ಲದೇ ಆಕೆಯ ಮುಂದೆಯೇ ಇನ್ನೊಂದು ಹುಡುಗಿಯ ಜೊತೆ ಸಲುಗೆ ಬೆಳೆಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಎರಡು ತಿಂಗಳಿಂದ ಡೈವರ್ಸ್ ಕೊಡುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಅನುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಇದೇ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ಆಗಾಗ ಜಗಳ ನಡೆಯುತ್ತಿತ್ತು. ಮೊನ್ನೆಯೂ ಇದೇ ವಿಚಾರಕ್ಕೆ ಗಲಾಟೆ ಆಗಿದ್ದು, ಇದರಿಂದ ಮನನೊಂದ ಅನುಷಾ ಬಾತ್ ರೂಂನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ಆಕೆಯ ಕಿರುಚಾಟ ಕೇಳಿ ಬಂದ ಕುಟುಂಬಸ್ಥರು ಕೂಡಲೇ ಬಾಗಿಲು ಮುರಿದು ಬೆಂಕಿ ನಂದಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅನುಷಾ ಮೃತಪಟ್ಟಿದ್ದಾಳೆ.
ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಾಯಿ ಇಲ್ಲದೆ ಮಗುವು ತಬಲಿಯಾಗಿದೆ.
ಅನುಷಾ ಗಂಡನಿಗೆ ವಾಟ್ಸಪ್ ಕಾಲ್ ಮಾಡುತ್ತಲೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಅದನ್ನೂ ಕಂಡರೂ ಶ್ರೀಹರಿ ಸುಮ್ಮನಾಗಿದ್ದ. ಮೂರು ತಿಂಗಳಿನಿಂದ ಡಿವರ್ಸ್ ಕೊಡುವಂತೆ ಪೀಡಿಸುತ್ತಿದ್ದ. ನನಗೆ ಬೇರೆ ಸಂಬಂಧ ಇದೆ ನನ್ನ ಬಿಟ್ಟು ಬಿಡು ಅಂತಿದ್ದ. ಆಕೆ ಬೆಂಕಿ ಹಚ್ಚಿಕೊಂಡಾಗ ಕಾಪಾಡಬಹುದಿತ್ತು, ಆದರೆ ಸಾಯಲಿ ಅಂತಾನೇ ಸುಮ್ಮನೆ ಇದ್ದಾನೆ. ಮದುವೆ ಆದಾಗಿನಿಂದಲೂ ಚಿತ್ರಹಿಂಸೆ ನೀಡುತ್ತಾನೆ ಇದ್ದ ಎಂದು ಮೃತಳ ಅಕ್ಕ ಉಷಾ ಆಕ್ರೋಶ ಹೊರಹಾಕಿದ್ದರು.








