ಉತ್ತಮ ಆರೋಗ್ಯ ಮತ್ತು ಉತ್ತಮ ಉದ್ಯೋಗ ದೊರೆತಾಗ ಆ ಮಗು ಸ್ವತಂತ್ರವಾಗಿ ಬದುಕಲು ಸಹಾಯವಾಗುತ್ತದೆ- ಅಶೋಕ್ ಕುಮಾರ್ ರೈ


ಪಡಿಬಾಗಿಲು: ನೂತನವಾಗಿ ನಿರ್ಮಾಣವಾದ ವಿವೇಕ ತರಗತಿ ಕೊಠಡಿ ಹಾಗೂ ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್ ಅನುದಾನದಿಂದ ನಿರ್ಮಾಣವಾದ ತರಗತಿ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮವು ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಪಡಿಬಾಗಿಲು ಇಲ್ಲಿ ನಡೆಯಿತು.
ನೂತನವಾಗಿ ನಿರ್ಮಾಣವಾದ ವಿವೇಕ ತರಗತಿ ಕೊಠಡಿ ಹಾಗೂ ತರಗತಿ ಕೊಠಡಿಗಳನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ ಹಾಗೂ ರಾಜ್ಯ ಮತ್ತು ದೇಶದ ಪ್ರಗತಿಗೆ ಕಾರಣವಾಗಿದೆ. ಉತ್ತಮ ಆರೋಗ್ಯದ ಜೊತೆಗೆ ಶಿಕ್ಷಣವನ್ನು ನೀಡಿ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಬೇಕು. ಎರಡು ಗ್ರಾಮ ಪಂಚಾಯಿತಿಗೆ ಒಂದರಂತೆ ಕೆಪಿಎಸ್ ಶಾಲೆಗಳನ್ನು ತೆರೆಯುವಂತೆ ಪ್ರಯತ್ನಿಸಲಾಗುತ್ತದೆ, ಒಂದು ಉತ್ತಮ ಸಮಾಜದ ನಿರ್ವಹಣೆಗೆ ಜನರ ಭಾವನೆಗೆ ಸ್ಪಂದಿಸುವುದು ಮುಖ್ಯವಾಗಿದೆ. ಯಾವ ಮಗುವೂ ವಿದ್ಯಾಭ್ಯಾಸದಿಂದ ವಂಚಿತವಾಗಬಾರದು ಅಲ್ಲದೆ ಉತ್ತಮ ಆರೋಗ್ಯ ಮತ್ತು ಉತ್ತಮ ಉದ್ಯೋಗ ದೊರೆತಾಗ ಆ ಮಗು ಸ್ವತಂತ್ರವಾಗಿ ಬದುಕಲು ಸಹಾಯವಾಗುತ್ತದೆ. ಶಿಕ್ಷಣವು ಕೇವಲ ಪಠ್ಯ ಪುಸ್ತಕ ಸೀಮಿತವಾಗಿರದೇ ಆಚಾರ ವಿಚಾರ ಸಂಸ್ಕೃತಿಯನ್ನೂ ಬಿಂಬಿಸಬೇಕಾಗುತ್ತದೆ. ಇಂದು ಗ್ರಾಮೀಣ ಪ್ರತಿಭೆಗಳಿಗೆ ಕೊರತೆ ಇಲ್ಲ ಒಳ್ಳೆಯ ಮೌಲ್ಯಯುತ ಶಿಕ್ಷಣದ ಮೂಲಕ ಜೀವನದಲ್ಲಿ ಸಂಸ್ಕಾರವಂತರಾಗಿ ಸಮಾಜವನ್ನು ಕಟ್ಟುವಲ್ಲಿ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಾಗಿದೆ ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವಂತಾಗಲಿ ಎಂದು ಹೇಳಿದರು.


ಎಂ.ಆರ್.ಪಿ.ಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್ ದಯಾನಂದ ಪ್ರಭು ಇವರು ತಮ್ಮ ಸಂಸ್ಥೆಯ ಅನುದಾನದಿಂದ ನೂತನವಾಗಿ ನಿರ್ಮಿಸಲ್ಪಟ್ಟ ತರಗತಿ ಕೊಠಡಿಗಳನ್ನು ಉದ್ಘಾಟಿಸಿ ಮತನಾಡಿ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಅನೇಕ ಸಂಸ್ಥೆಗಳು ತಮ್ಮ ಸಂಸ್ಥೆಯ ನಿಯಮದ ಪ್ರಕಾರ ಸಮಾಜಮುಖಿ ಕೆಲಸಗಳಲ್ಲಿ ತೊಡಗುತ್ತಿವೆ, ಕೇಂದ್ರ ಸರಕಾರ ರೀತಿ ನೀತಿ ನಿಯಮದ ಪ್ರಕಾರ ಈ ಹಿಂದೆ ಸ್ವಚ್ಛತೆ, ಶೌಚಾಲಯ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಕೆಲಸಗಳು ಜರಗಿದವು. ಸದರಿ ವರ್ಷದಿಂದ ಪ್ರಧಾನ ಮಂತ್ರಿಗಳ ಕನಸಿನಂತೆ ಫಿಟ್ ಇಂಡಿಯಾ ಸ್ಕಿಲ್ ಇಂಡಿಯಾ ಎಂಬ ವಿಚಾರಗಳಿಗೆ ಇಂದು ಎಂ.ಆರ್.ಪಿ.ಎಲ್ ಸಂಸ್ಥೆ ಸ್ಪಂದನೆ ನೀಡುತ್ತಿದೆ. ಈ ಪ್ರಕಾರವಾಗಿ ಪೌಷ್ಠಿಕ ಆಹಾರ ವಿತರಣೆ ಹಾಗೂ ಸಮಾಜ ಸೇವೆಯ ಮೂಲಕ ತನ್ನದೇ ಆದ ಸಮಾಜದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿವೆ. ಹಲವು ಸಂಸ್ಥೆಗಳು ತಮ್ಮ ಸೌಲಭ್ಯವನ್ನು ಎಲ್ಲಾ ಕ್ಷೇತ್ರಗಳಿಗೆ ಮೀಸಲಿಡುವುದರ ಮೂಲಕ ಉತ್ತಮ ಸಮಾಜವನ್ನು ಹೊಂದಲು ಸಾಧ್ಯವಾಗಿದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕೇಪು ಗ್ರಾಮ ಪಂಚಾಯತ್ನ ಅಧ್ಯಕ್ಷ ರಾಘವ ಮಣಿಯಾಣಿ ಯವರು ಒಂದು ವಿದ್ಯಾಸಂಸ್ಥೆಯು ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಊರವರ, ಪೋಷಕರ ಸಹಕಾರ ಅತ್ಯಂತ ಅವಶ್ಯಕವಾಗಿದೆ ಗ್ರಾಮದ ಏಳಿಗೆಗೆ ಸಮನಾಗಿದೆ. ಒಂದು ಉತ್ತಮ ವಿದ್ಯಾಸಂಸ್ಥೆಯ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸವು ಸರ್ವತೋಮುಖವಾದ ಬೆಳವಣಿಗೆಯನ್ನು ಕಾಣಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಎಂ.ಆರ್.ಪಿ.ಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್ ದಯಾನಂದ ಪ್ರಭು ಹಾಗೂ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿ ಸ್ಪಂದನೆ ನೀಡಿದ ಕೇಪು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ಎಮ್ ಜಿ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೇಪು ಗ್ರಾಮ ಪಂಚಾಯತ್ನ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ, ಪುರುಷೋತ್ತಮ ಗೌಡ, ಅಬ್ದುಲ್ ಕರೀಂ, ಸದಸ್ಯೆಯರಾದ ಮೋಹಿನಿ, ವಿಶಾಲಾಕ್ಷಿ, ವಿದ್ಯಾಸಿರಿ ಶಿಕ್ಷಣ ಕೇಂದ್ರ ಪಡಿಬಾಗಿಲು ಇದರ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ದಂಬೆಕಾನ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ವಿಶಾಲಾಕ್ಷಿ ಮತ್ತು ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಂದೇಶ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ವಿಟ್ಲ ಪಂಚಾಯತ್ನ ಮಾಜಿ ಉಪಾಧ್ಯಕ್ಷ ರಮನಾಥ ವಿಟ್ಲ, ಶ್ರೀನಿವಾಸ ಶೆಟ್ಟಿ, ಮುರಳಿದ ರೈ, ಸಂಗಮ ಯುವಕ ಮಂಡಳದ ಉಪಾಧ್ಯಕ್ಷ ರಘುನಾಥ್, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಆನಂದ ಆಚಾರ್ಯ,ಕೇಪು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪುಷ್ಪ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಯತೀಶ್ ಉಪಸ್ಥಿತರಿದ್ದರು.