




ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಬಯಲಾಟ ಮೇಳದ ಮುಂದಿನ ವರ್ಷದ ತಿರುಗಾಟದಲ್ಲಿ 7ನೇ ಮೇಳವನ್ನು ಆರಂಭಿಸಲಾಗುವುದು ಎಂದು ಕಟೀಲು ದೇವಸ್ಥಾನದ ಅನುವಂಶೀಕ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣ ಹೇಳಿದರು.
ಕಟೀಲು ದೇವಳದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ವರ್ಷದ ಯಕ್ಷಗಾನ ತಿರುಗಾಟದ ಕೊನೆಯ ದಿನವಾದ ಭಾನುವಾರ ಪತ್ತನಾಜೆಯ ಶುಭದಿನ ದೇವಿಯ ಸನ್ನಿಧಾನದಲ್ಲಿ ಹೂವಿನ ಪ್ರಸಾದದ ಮೂಲಕ ದೇವರ ಅಪ್ಪಣೆ ಪಡೆದು ಮೇಳವನ್ನು ಆರಂಭಿಸಲು ತಯಾರಿ ನಡೆಸಲಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ದಿನದಲ್ಲಿ ಯಕ್ಷಗಾನ ಸೇವೆಯು ಹೆಚ್ಚಾಗುತ್ತಿದ್ದು, ಈ ಬಾರಿ ಹೊಸದಾಗಿ 844 ಯಕ್ಷಗಾನ ಸೇವೆ ಆಟಗಳು ನಿಗಧಿಯಾಗಿವೆ. ಪ್ರತಿ ವರ್ಷ 450 ಖಾಯಂ ಆಟ ನಡೆಸುವುದರೊಂದಿಗೆ ತತ್ಕಾಲ ಯೋಜನೆಯಲ್ಲಿ ಪ್ರಸ್ತುತ ವರ್ಷದಲ್ಲಿ 240 ಯಕ್ಷಗಾನ ಆಟ ನಡೆದಿದೆ. ಹೀಗೆ ಪ್ರತಿ ವರ್ಷ ಸುಮಾರು 200ರಿಂದ 300 ಯಕ್ಷಗಾನ ಸೇವೆ ಆಟ ಉಳಿಯುತ್ತಿದ್ದು, ಈಗಾಗಲೇ ಏಳು ಸಾವಿರದಷ್ಟು ಸೇವೆ ಆಟ ಉಳಿದಿದೆ. ಇದನ್ನು ಮನಗಂಡು ಆಡಳಿತ ಮಂಡಳಿಯ ತೀರ್ಮಾನದ ಜೊತೆಗೆ ದೇವಿಯ ಅಪ್ಪಣೆಯಂತೆ ಮೇಳವನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇನ್ನು ಮೇಳಕ್ಕೆ ಎಲ್ಲಾ ಪರಿಕರಗಳು ಈಗಾಗಲೇ ದಾನಿಗಳ ಮೂಲಕ ಸಲ್ಲಿಕೆಯಾಗಿದೆ. ಹೊಸ ಕಲಾವಿದರೊಂದಿಗೆ ಅನುಭವಿ ಕಲಾವಿದರ ಸೇರ್ಪಡೆ ಆಗಲಿದೆ. ಅಂತಿಮ ಪಟ್ಟಿಯನ್ನು ನವೆಂಬರ್ 16ರಂದು ಮೇಳ ಹೊರಡುವ ಸಮಯದಲ್ಲಿ ತಿಳಿಸಲಾಗುತ್ತದೆ. ಹವ್ಯಾಸಿ ಕಲಾವಿದರೊಂದಿಗೆ ಮೇಳದ ಖಾಯಂ ಕಲಾವಿದರು 7 ಮೇಳಗಳ ತಿರುಗಾಟದಲ್ಲಿ ಭಾಗವಹಿಸಲಿದ್ದಾರೆ. ಕಲಾವಿದರಿಗೆ ಹಿಂದಿನAತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಸೇವೆ ಆಟದ ಒತ್ತಡ ನಿಯಂತ್ರಿಸಲು ಏಳನೇ ಮೇಳವನ್ನು ಆರಂಭಿಸಲಾಗಿದೆ ಎಂದರು. ಇನ್ನು ಪ್ರಸಕ್ತ ಸಾಲಿನ 7ನೇ ಮೇಳದ ತಿರುಗಾಟದಲ್ಲಿ ಇತ್ತೀಚಿಗೆ ರಕ್ತಬೀಜನ ಪಾತ್ರದ ಮೂಲಕ ಪ್ರಸಿದ್ಧಿಗೆ ಬಂದ ಕಾಸರಗೋಡು ಮೂಲಕ ಕಿರೀಟ ವೇಷಧಾರಿಯೊಬ್ಬರು ಈ ಬಾರಿ ಕಟೀಲು ಮೇಳದಲ್ಲಿ ತಿರುಗಾಟ ಮಾಡುವುದು ಎಂಬ ಸುದ್ದಿ ಹರಿದಾಡುತ್ತಿದೆ. ಈ ಕಲಾವಿದ ಕೆಲವು ವರ್ಷಗಳಿಗೊಮ್ಮ ಮೇಳದಿಂದ ಮೇಳಕ್ಕೆ ಪಲಾಯನ ಮಾಡುತ್ತಿದ್ದು, ಕಳೆದ ವರ್ಷವಷ್ಟೇ ಒಂದು ಮೇಳದಿಂದಿ ಇನ್ನೊಂದು ಮೇಳಕ್ಕೆ ಪಲಾಯನ ಮಾಡಿದ್ದು, ಇದೀಗ ಮತ್ತೆ ಅಲ್ಲಿಂದ ಕಟೀಲು ಮೇಳಕ್ಕೆ ಪಲಾಯನ ಮಾಡುವುದು ಬಹುತೇಕ ಖಚಿತ ಎಂದು ಕಲಾವಲಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.









