ನಿವಾರ್ ಚಂಡಮಾರುತದ ನೆನಪು ಮಾಸುವ ಮೊದಲೇ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ರಕ್ಕಸ ಮಾರುತವನ್ನು ಸೃಷ್ಟಿಸಿಬಿಟ್ಟಿದೆ. ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾದ ಈ ಸೈಕ್ಲೋನ್ಗೆ ಬುರೇವಿ ಅಂತಾ ಹೆಸರಿಡಲಾಗಿದ್ದು, ದಕ್ಷಿಣ ರಾಜ್ಯದ ತೀರಗಳನ್ನೇ ಗುರಿಯಾಗಿಟ್ಟುಕೊಂಡು ಭಾರತದತ್ತ ನುಗ್ಗುತ್ತಿದೆ.
ಈ ಚಂಡಮಾರುತದ ಪರಿಣಾಮವಾಗಿ ತಮಿಳುನಾಡು, ಕೇರಳ, ಪಾಂಡಿಚೇರಿ ಹಾಗೂ ಆಂಧ್ರ ಪ್ರದೇಶದ ದಕ್ಷಿಣ ಜಿಲ್ಲೆಗಳಲ್ಲಿ ಮುಂದಿನ 3-4 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸದ್ಯ ದಕ್ಷಿಣದ ತುತ್ತತುದಿ ಕನ್ಯಾಕುಮಾರಿಯಿಂದ 930 ಕಿಲೋ ಮೀಟರ್ ದೂರದಲ್ಲಿರುವ ಈ ರಕ್ಕಸ ಸೈಕ್ಲೋನ್, ಗಂಟೆಗೆ 80 ಕಿಲೋ ಮೀಟರ್ ವೇಗದಲ್ಲಿ ಭಾರತದ ಕಡೆ ನುಗ್ಗುತ್ತಿದೆ. ಗುರುವಾರ ಬೆಳಗ್ಗೆ ಭಾರತದ ದಕ್ಷಿಣ ತೀರಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ತಮಿಳುನಾಡು, ಕೇರಳ, ಆಂಧ್ರಪ್ರದೇಶದ ದಕ್ಷಿಣ ಜಿಲ್ಲೆಗಳಲ್ಲಿ ಡಿಸೆಂಬರ್ 4ರವರೆಗೆ ಹೈ-ಅಲರ್ಟ್ ಘೋಷಿಸಲಾಗಿದೆ.
ಸೈಕ್ಲೋನ್ ತಮಿಳುನಾಡು ರಾಜ್ಯದ ತೀರಕ್ಕೆ ಅಪ್ಪಳಿಸಲಿದೆ. ಸೈಕ್ಲೋನ್ನ ಪ್ರಭಾವ ಕರ್ನಾಟಕದ ಮೇಲೆ ಅಷ್ಟೊಂದಾಗಿ ಬೀರದೇ ಇದ್ದರೂ, ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಇಷ್ಟಾದ್ರೂ ತೀರಪ್ರದೇಶಕ್ಕೆ ಅಪ್ಪಳಿಸುವ ಚಂಡಮಾರುತ ಎಷ್ಟು ಪ್ರಬಲವಾಗಿರುತ್ತೆ ಅನ್ನೋದನ್ನ ಆಧರಿಸಿ ಪರಿಣಾಮವನ್ನ ಅಳೆಯಬೇಕಾಗಿದೆ. ಇದಕ್ಕಾಗಿ ಗುರುವಾರ ಬೆಳಗ್ಗೆ ವರೆಗೂ ಸಮಯವಿದೆ. ಕೊರೊನಾದಿಂದ ತತ್ತರಿಸಿರುವ ದೇಶಕ್ಕೆ, ಒಂದಾದರ ಮೇಲೆ ಒಂದು ಎಂಬಂತೆ ಬರುತ್ತಿರುವ ಚಂಡಮಾರುತಗಳ ಹೊಡೆತ ಗಾಯದ ಮೇಲೆ ಬರೆ ಎಳೆದಂತಾಗಿರೋದಂತೂ ಸತ್ಯ.