



ಪುತ್ತೂರು: ಪುತ್ತೂರಿನ ಹೊರವಲಯದ ಮಾಣಿ ಮೈಸೂರು ಹೆದ್ದಾರಿಯ ಪೊಳ್ಯ ತಿರುವಿನಲ್ಲಿ ಕ್ರೇಟಾ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಸವಾರ ಹೆದ್ದಾರಿ ಪಕ್ಕದ ಗುಂಡಿಗೆ ಉರುಳಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.ನವೆಂಬರ್ 11 ರಂದು ಸಂಜೆ ಈ ಅಪಘಾತ ಸಂಭವಿಸಿದೆ. ಮೂಲಗಳ ಪ್ರಕಾರ, ಕಬಕದಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಕ್ರೇಟಾ ಕಾರು, ಪೊಳ್ಯ ತಿರುವಿನಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನದ ಸವಾರ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯ ಪಕ್ಕದಲ್ಲಿದ್ದ ದೊಡ್ಡ ಗುಂಡಿಗೆ ಬಿದ್ದಿದ್ದಾರೆ. ಇನ್ನೂ ಕಾರು ಅಕ್ಟಿವಾ ವಾಹನಕ್ಕೆ ಗುದ್ದಿ 200 ಮೀ ದೂರ ಬಂದು ಮತ್ತೊಂದು ಗುಂಡಿಗೆ ಬಿದ್ದಿದೆ.ತಲೆ ಮತ್ತು ಕೈಗೆ ಗಂಭೀರವಾಗಿ ಗಾಯಗೊಂಡಿದ್ದ ಸವಾರನನ್ನು ಸ್ಥಳೀಯರು ತಕ್ಷಣವೇ ರಕ್ಷಿಸಿ, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ದ್ವಿಚಕ್ರ ವಾಹನವು ಸಾಮೆತ್ತಡ್ಕ ನಿವಾಸಿ ಮಸಾಲೆ ಕಂಪೆನಿಯೊಂದರ ಉದ್ಯೋಗಿ ಶಶಿಕುಮಾರ್ ಎಂಬುವವರಿಗೆ ಸೇರಿರುವುದಾಗಿ ಕಂಡುಬಂದಿದ್ದು. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.ಪ್ರಾಥಮಿಕ ಮಾಹಿತಿ ಪ್ರಕಾರ, ಕಾರು ಚಲಾಯಿಸುತ್ತಿದ್ದವರು ಕಬಕ ಬಳಿಯ ನಿವಾಸಿ ಮಹಮ್ಮದ್ ತೌಫಿಕ್ ಎಂದು ತಿಳಿದುಬಂದಿದೆ.
ಅಪಘಾತದ ಬಳಿಕ ಆತ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆತ ಮಾದಕ ದ್ರವ್ಯ ಸೇವಿಸಿದ್ದ ಎಂಬ ಆರೋಪಗಳಿದ್ದು, ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ. ಈ ಹಿನ್ನೆಲೆಯಲ್ಲಿ ಕಾರು ಚಾಲಕನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.








