


ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ 5ನೇ ದಿನದ ಉತ್ಖನನ ಕಾರ್ಯ ಮುಂದುವರೆದಿದೆ. ಭೂಮಿ ಅಗೆದಂತೆಲ್ಲಾ ಅನೇಕ ಶಿಲಾಕೃತಿಗಳು, ಕುರುಹುಗಳು ಪತ್ತೆಯಾಗುತ್ತಿವೆ. ಒಡೆದ ಮಡಿಕೆ ಆಕೃತಿಯ ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಇನ್ನು ಐತಿಹಾಸಿಕ ದೇವಸ್ಥಾನವನ್ನು ಮನೆಯನ್ನಾಗಿಸಿಕೊಂಡು ನಾಲ್ಕೈದು ಕುಟುಂಬಗಳು, ನಾಲ್ಕೈದು ತಲೆಮಾರುಗಳಿಂದ ವಾಸ ಮಾಡುತ್ತಿವೆ. ಗದಗದ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಅಂಗಳದಲ್ಲಿ 5ನೇ ದಿನವೂ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದೆ. 35 ಜನ ಕಾರ್ಮಿಕರಿಂದ ಉತ್ಖನನ ಕಾಮಗಾರಿ ನಡೆಯುತ್ತಿದೆ. ಉತ್ಖನನ ವೇಳೆ ಒಡೆದ ಮಡಿಕೆಯ ಅವಶೇಷ ಪತ್ತೆಯಾಗಿದೆ, ಸಿಕ್ಕ ಒಡೆದ ಮಡಿಕೆ ಹಳೆಯ ಕಾಲದ್ದು ಎನ್ನಲಾಗಿದೆ. ಈ ಪ್ರಾಚ್ಯಾವಶೇಷವನ್ನು ತುಂಬಾ ನಾಜೂಕಿನಿಂದ ಸ್ವಚ್ಛಗೊಳಿಸಿ, ಅದನ್ನು ಹೊರ ತೆಗೆಯುವ ಕೆಲಸ ಸಿಬ್ಬಂದಿಗಳು ಮಾಡಿದರು ಎಂದು ವರದಿ ಮೂಲಕ ತಿಳಿದು ಬಂದಿದೆ.
ಲಕ್ಕುಂಡಿಯಲ್ಲಿ ಮನೆಯೊಳಗೊಂದು ಐತಿಹಾಸಿಕ ದೇವಸ್ಥಾನ ಪತ್ತೆಯಾಗಿದ್ದು, ಈ ದೇವಸ್ಥಾನ ಚಾಲುಕ್ಯರ ಕಾಲದ ಪುರಾತನ ಕಾಲದ್ದು ಎನ್ನಲಾಗುತ್ತಿದೆ. ಇದು ಹೊರಗೆ ನೋಡಿದ್ರೆ ಮನೆ ಆಕಾರದಲ್ಲಿದೆ. ಒಳಗೆ ಹೋದರೆ ಪುರಾತನ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಚೌಕಿಮಠ ಎಂಬ ಐದು ಕುಟುಂಬಗಳು ನಾಲ್ಕೈದು ತಲೆಮಾರುಗಳಿಂದ ವಾಸ ಮಾಡುತ್ತಿದ್ದಾರೆ. ಈ ದೇವಸ್ಥಾನವೇ ಈ ಕುಟುಂಬಸ್ಥರಿಗೆ ಸೂರಾಗಿದೆ. ಈ ಆವರಣದಲ್ಲಿ ಈಶ್ವರ ಹಾಗೂ ಅರ್ಧನಾರೀಶ್ವರ ದೇವಸ್ಥಾನವಿದೆ. ಇದು ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನ ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ








