


ಸಿಯಾಟಲ್: 2023ರ ಜನವರಿಯಲ್ಲಿ ಪೊಲೀಸ್ ಅಧಿಕಾರಿಯೋರ್ವರು ವೇಗವಾಗಿ ಚಲಾಯಿಸಿದ ವಾಹನ ಢಿಕ್ಕಿಯಾಗಿ ಭಾರತ ಮೂಲದ ಸ್ನಾತಕೋತ್ತರ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರು ಮತಪಟ್ಟಿದ್ದರು. ಈ ಕುರಿತ ಮೊಕದ್ದಮೆಯ ಇತ್ಯರ್ಥಕ್ಕೆ ಜಾಹ್ನವಿ ಕುಟುಂಬ ಒಪ್ಪಿಕೊಂಡಿದೆ. ಅವರ ಕುಟುಂಬಕ್ಕೆ ಸಿಯಾಟೆಲ್ನ ಸ್ಥಳೀಯಾಡಳಿತ 29 ಮಿಲಿಯನ್ ಡಾಲರ್ ಅಂದರೆ ಸುಮಾರು ರೂ. 262 ಕೋಟಿ ರೂ. ಪರಿಹಾರ ಪಾವತಿಸಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಜಾಹ್ನವಿ ಕುಟುಂಬ 2024ರಲ್ಲಿ ಸಿಯಾಟಲ್ನ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ವಿರುದ್ಧ 110 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಮೊಕದ್ದಮೆ ಹೂಡಿತ್ತು. ಇದಾದ ಬಳಿಕ ಕಳೆದ ವರ್ಷ ಕೆವಿನ್ ಡೇವ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.
ಈ ಕುರಿತು ವಕೀಲ ಎರಿಕಾ ಇವಾನ್ಸ್ ಬುಧವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಜಾಹ್ನವಿ ಕಂದುಲಾ ಅವರು ಮೃತಪಟ್ಟ ಘಟನೆ ಆಘಾತಕಾರಿಯಾಗಿದೆ. ಈ ಪರಿಹಾರವು ಅವರ ಕುಟುಂಬಕ್ಕೆ ಸ್ವಲ್ಪ ಮಟ್ಟಿಗೆ ಸಮಾಧಾನ ತರಲಿದೆ ಎಂದು ಹೇಳಿದ್ದಾರೆ.
ಕಂದುಲಾ ಅವರು ಸಿಯಾಟಲ್ ನಾರ್ಥ್ ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. 2023ರ ಜನವರಿ 23ರಂದು ಅವರು ರಸ್ತೆ ದಾಟುತ್ತಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದರು.
ಕೆವಿನ್ ಡೇವ್ 25 ಕಿ.ಮೀ ವೇಗದಲ್ಲಿ ಚಲಿಸಬೇಕಿದ್ದ ವಲಯದಲ್ಲಿ 74 ಕಿ.ಮೀ ವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದರು ಎನ್ನುವುದು ತನಿಖೆಯಲ್ಲಿ ಬಯಲಾಗಿತ್ತು.








