ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಎಂಜಿರದಲ್ಲಿ ಲಾರಿಗೆ ಕಾರು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿ ಹಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಬೆಂಗಳೂರು ಮಾಗಡಿ ಮೂಲದ ನಂಜುಂಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್ಸಿ ನ್ಯಾಯಾಲಯವು ಮಾರ್ಚ್ 13ರಂದು ವಜಾಗೊಳಿಸಿದೆ

.ಪ್ರಕರಣದ ವಿಚಾರಣೆಯ ವೇಳೆ ಸರಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ (ಪುತ್ತೂರು) ಬಲವಾದ ವಾದ ಮಂಡಿಸಿದರು. ಅವರ ವಾದವನ್ನು ಪರಿಗಣಿಸಿದ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಅವರು ಆರೋಪಿ ನಂಜುಂಡನ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿ ನ್ಯಾಯಾಂಗ ಬಂಧನ ವಿಧಿಸುವಂತೆ ಆದೇಶಿಸಿದರು.ಘಟನೆಯ ವಿವರ2017ರ ಏಪ್ರಿಲ್ 8ರಂದು ಚಿಕ್ಕಮಗಳೂರು ಜಿಲ್ಲೆಯ ಅಂಬಲೆ ನಿವಾಸಿ ರಾಘವೇಂದ್ರ ಅವರು ಲಾರಿ (ಕೆಎ-40-ಎ-2076)ಯಲ್ಲಿ ಗೌರಿಬಿದನೂರಿನ ತೊಂಡೆಬಾವಿಯಿಂದ ಸಿಮೆಂಟ್ ಲೋಡ್ ಮಾಡಿಕೊಂಡು ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದರು. ರಾತ್ರಿ ಸುಮಾರು 10.15ರ ವೇಳೆಗೆ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಎಂಜಿರ ಬಳಿ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮೂತ್ರಶಂಕೆಗಾಗಿ ಇಳಿದು ಮತ್ತೆ ಲಾರಿಗೆ ಹತ್ತುವ ಸಂದರ್ಭ ಕಾರೊಂದು ಲಾರಿಗೆ ಅಡ್ಡಬಂದಿತ್ತು.
ಆ ಕಾರಿನಿಂದ ಐವರು ಇಳಿದು ಲಾರಿಗೆ ನುಗ್ಗಿ ಚಾಲಕನನ್ನು ಬೆದರಿಸಿದರು. ಅವರ ಪೈಕಿ ಒಬ್ಬನು ಚೂರಿ ತೋರಿಸಿ ಹಣ ನೀಡುವಂತೆ ಒತ್ತಾಯಿಸಿದನು. ರಾಘವೇಂದ್ರ ತಮ್ಮ ಬಳಿ ಹಣ ಇಲ್ಲ ಎಂದು ಹೇಳಿದಾಗ ಆರೋಪಿಗಳು ಅವರನ್ನು ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದರು. ಬಳಿಕ ಚೂರಿಯಿಂದ ಎಡಕಾಲಿನ ಮೊಣಕಾಲು, ಎದೆಯ ಭಾಗ ಮತ್ತು ಬಲಭುಜಕ್ಕೆ ಗಾಯಗೊಳಿಸಿದರು.ಆ ಬಳಿಕ ಚಾಲಕರ ಬಳಿಯಿದ್ದ ಸುಮಾರು ₹17,000 ನಗದು, ಕರ್ಣಾಟಕ ಬ್ಯಾಂಕ್ ಎಟಿಎಂ ಕಾರ್ಡ್ ಇರುವ ಪರ್ಸ್, ಸುಮಾರು ₹12,000 ಮೌಲ್ಯದ ಮೊಬೈಲ್ ಫೋನ್ ಹಾಗೂ ಲಾರಿಯ ಕೀ ತೆಗೆದುಕೊಂಡು ಮಹೀಂದ್ರ ಕಾರಿನಲ್ಲಿ ಮಂಗಳೂರು ಕಡೆಗೆ ಪರಾರಿಯಾಗಿದ್ದರು. ಘಟನೆಯ ಬಳಿಕ ಲಾರಿಯೊಳಗೆ ಆರೋಪಿಗಳಿಗೆ ಸೇರಿದ ನೋಕಿಯಾ ಮೊಬೈಲ್ ಫೋನ್ ಒಂದು ಪತ್ತೆಯಾಗಿತ್ತು. ಗಾಯಗೊಂಡ ರಾಘವೇಂದ್ರ ಬಳಿಕ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ 2017ರ ಏಪ್ರಿಲ್ 9ರಂದು ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.
ಈ ಪ್ರಕರಣದಲ್ಲಿ ಮಯಾಕೃಷ್ಣ ಮಾಂಗ, ಮಣಿಕಂಠ ಮೂರ್ತಿ, ಪಿಂಟು @ ಪ್ರಭು, ಕುರಲ್ಕುಳ್ಳ ಹಾಗೂ ನಂಜುಂಡ ಅವರನ್ನು ಆರೋಪಿಗಳಾಗಿ ಗುರುತಿಸಿ ಬಂಧಿಸಲಾಗಿತ್ತು. ಆದರೆ ನಂಜುಂಡ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.ಇತ್ತೀಚೆಗೆ ಕಾರ್ಯಾಚರಣೆ ನಡೆಸಿದ ಧರ್ಮಸ್ಥಳ ಠಾಣೆ ಪೊಲೀಸರು ನಂಜುಂಡನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಆತನ ಪರವಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ ನ್ಯಾಯಾಂಗ ಬಂಧನ ಮುಂದುವರಿಸುವಂತೆ ಆದೇಶಿಸಿದೆ.








