




ವಾರಣಾಸಿ, ಎ.6: ಪವಿತ್ರ ಗಂಗಾ ನದಿಯ ಮಧ್ಯದಲ್ಲಿರುವ ದೋಣಿಯಲ್ಲಿ ಮದ್ಯಪಾನ ಪಾರ್ಟಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ಕುರಿತು ವಾರಣಾಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು UNI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೆಲ ದಿನಗಳ ಹಿಂದೆ ದೋಣಿಯಲ್ಲಿ ಬಿರಿಯಾನಿ ಪಾರ್ಟಿ ನಡೆಸಿ, ಆಹಾರದ ಅವಶೇಷಗಳನ್ನು ಗಂಗಾ ನದಿಗೆ ಎಸೆಯಲಾಗಿದ್ದ ಘಟನೆ ದೇಶದ ಗಮನಸೆಳೆದಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೊಂದು ವಿವಾದಾತ್ಮಕ ಘಟನೆ ಬೆಳಕಿಗೆ ಬಂದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ದೀಪಗಳಿಂದ ಅಲಂಕರಿಸಲಾದ ದೋಣಿಯಲ್ಲಿ ಡಿಜೆ ಸಂಗೀತದ ನಡುವೆ ಕೆಲವರು ಬಿಯರ್ ಕುಡಿದು ನೃತ್ಯ ಮಾಡುತ್ತಿರುವುದು ಕಾಣಿಸುತ್ತದೆ. ಗಂಗಾ ನದಿಯಲ್ಲಿ ಮದ್ಯಪಾನ, ಡಿಜೆ ಸಂಗೀತ ಸೇರಿದಂತೆ ಇಂತಹ ಚಟುವಟಿಕೆಗಳಿಗೆ ನಿರ್ಬಂಧವಿದೆ.ಸಹಾಯಕ ಪೊಲೀಸ್ ಆಯುಕ್ತ ಡಾ. ಅತುಲ್ ಅಂಜನ್ ತ್ರಿಪಾಠಿ ಅವರು ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ವಿಡಿಯೋ ಆಧರಿಸಿ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ದೃಶ್ಯಾವಳಿಗಳಲ್ಲಿ ಕಾಣಿಸುವ ವ್ಯಕ್ತಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಘಟನೆ ನಡೆದ ನಿಖರ ಸ್ಥಳ ಮತ್ತು ಸಮಯದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ ʼನಮ್ಮ ಜನರ ಇಂಧನ ಭದ್ರತೆಯನ್ನು ಖಾತ್ರಿಪಡಿಸಲು ಸರ್ಕಾರ ಬದ್ಧʼ
ಪ್ರತಿ ವರ್ಷದಂತೆ ಅಷ್ಟಮಿ ಸಂದರ್ಭದಲ್ಲಿ ದೋಣಿ ಚಾಲಕರು ಮಿರ್ಜಾಪುರ ಜಿಲ್ಲೆಯ ಅಡಲ್ ಪುರದಲ್ಲಿರುವ ಶೀತ್ಲಾ ಮಾತಾ ದೇವಾಲಯಕ್ಕೆ ಕಾಣಿಕೆಗಳನ್ನು ಸಾಗಿಸುವ ಸಂಪ್ರದಾಯವಿದೆ. ವೈರಲ್ ವಿಡಿಯೋ ಇದೇ ಸಂದರ್ಭದ್ದಾಗಿರಬಹುದು ಎನ್ನಲಾಗಿದೆ.
ಈ ನಡುವೆ, ‘ಮಾ ಗಂಗಾ ನಿಷಾದರಾಜ್ ಸೇವಾ ಟ್ರಸ್ಟ್’ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಗಂಗಾ ನದಿಯ ಪವಿತ್ರತೆಯನ್ನು ಹಾನಿಗೊಳಿಸುವ ಇಂತಹ ಕೃತ್ಯಗಳು ಅಸಹ್ಯಕರ ಎಂದು ಹೇಳಿದೆ. ಮಾಝಿ ಸಮುದಾಯವೂ ಈ ಘಟನೆಯಿಂದ ಅಂತರ ಕಾಯ್ದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.








