
ಸಕಲೇಶಪುರ: ತಾಲೂಕಿನ ಉದೇವಾರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣಕ್ಕೆ ಬುಧವಾರ ಬೆಳಿಗ್ಗೆ ಕಾಡಾನೆ ‘ಭೀಮ’ ಪ್ರವೇಶಿಸಿದ ಘಟನೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಲ್ಲಿ ಕುತೂಹಲದ ಜೊತೆಗೆ ಕೆಲಕಾಲ ಆತಂಕವೂ ಮೂಡಿಸಿತು.ಶಾಲಾ ಆವರಣದಲ್ಲಿ ಕಾಡಾನೆ ಕಾಣಿಸಿಕೊಂಡಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಸುರಕ್ಷಿತ ಅಂತರದಲ್ಲಿ ನಿಂತು ಅದರ ಚಲನವಲನವನ್ನು ವೀಕ್ಷಿಸಿದರು. ಮಾಹಿತಿ ತಿಳಿದ ಕೂಡಲೇ ಎಲಿಫೆಂಟ್ ಟಾಸ್ಕ್ ಫೋರ್ಸ್ (ಇಟಿಎಫ್) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.ಕಾಡಾನೆಯ ಚಲನವಲನದ ಮೇಲೆ ನಿರಂತರ ನಿಗಾ ವಹಿಸಿದ ಇಟಿಎಫ್ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅದರ ಸಮೀಪಕ್ಕೆ ತೆರಳದಂತೆ ಎಚ್ಚರಿಕೆ ವಹಿಸಿದರು. ಮುಂಜಾಗ್ರತಾ ಕ್ರಮಗಳ ಪರಿಣಾಮ ಯಾವುದೇ ಅನಾಹುತ ಸಂಭವಿಸದೆ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲಾಯಿತು.ಸ್ವಲ್ಪ ಸಮಯ ಶಾಲಾ ಆವರಣದಲ್ಲಿ ಸಂಚರಿಸಿದ ಕಾಡಾನೆ ‘ಭೀಮ’ ಬಳಿಕ ಸಮೀಪದ ಅರಣ್ಯ ಪ್ರದೇಶದತ್ತ ತೆರಳಿತು. ಈ ವೇಳೆ ಗ್ರಾಮಸ್ಥರಿಗೆ ಕಾಡಾನೆಗಳ ಚಲನವಲನದ ಕುರಿತು ಜಾಗೃತಿ ಮೂಡಿಸಿದ ಇಟಿಎಫ್ ಸಿಬ್ಬಂದಿ, ಕಾಡಾನೆ ಕಂಡುಬಂದಲ್ಲಿ ಅದನ್ನು ಕೆಣಕಲು ಅಥವಾ ಸಮೀಪಿಸಲು ಯತ್ನಿಸದೆ ತಕ್ಷಣ ಅರಣ್ಯ ಇಲಾಖೆ ಅಥವಾ ಇಟಿಎಫ್ಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಅಂಚಿನ ಪ್ರದೇಶಗಳ ನಿವಾಸಿಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.








