



ಚಾಮರಾಜನಗರ : ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ಮಗುವಿನ ರಕ್ಷಣೆಗೆ ಧಾವಿಸಿದ ಅಜ್ಜಿಯ ಮೇಲೂ ದಾಳಿ ನಡೆಸಿದ ಘಟನೆ ಜಿಲ್ಲೆಯ ಹನೂರು ತಾಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಕೆರೆ ದೊಡ್ಡಿಯಲ್ಲಿ ಶನಿವಾರ(ಜು.4) ರಾತ್ರಿ ನಡೆದಿದೆ.
ತಟ್ಟೆಕೆರೆ ದೊಡ್ಡಿ ಗ್ರಾಮದ ಶಿವಮ್ಮ (55) ಹಾಗೂ ಅವರ ಮೊಮ್ಮಗಳು ಹರ್ಷಿತಾ (5) ಗಾಯಗೊಂಡಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶನಿವಾರ ರಾತ್ರಿ ಶಿವಮ್ಮ ಮನೆಯ ಮುಂದೆ ಕುಳಿತಿದ್ದ ವೇಳೆ, ಸಮೀಪದಲ್ಲಿ ಆಟವಾಡುತ್ತಿದ್ದ ಹರ್ಷಿತಾಳ ಮೇಲೆ ಹಠಾತ್ತನೆ ಚಿರತೆ ದಾಳಿ ನಡೆಸಿದೆ. ಮಗುವಿನ ಕತ್ತಿಗೆ ಚಿರತೆ ಬಾಯಿ ಹಾಕಿದ್ದು, ಇದರಿಂದ ವಿಚಲಿತಳಾದ ಬಾಲಕಿ ಚೀರಿಕೊಂಡಾಗ, ಅಲ್ಲೇ ಇದ್ದ ಅಜ್ಜಿಯ ಬಳಿಗೆ ನೆಗೆದ ಚಿರತೆ ಅವರ ಬೆನ್ನಿನ ಭಾಗಕ್ಕೆ ಗಾಯಪಡಿಸಿದೆ. ಅಕ್ಕಪಕ್ಕದ ಸದ್ದು ಕೇಳಿ ಚಿರತೆ ಸ್ಥಳದಿಂದ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ದಾಳಿಯಲ್ಲಿ ಹರ್ಷಿತಾಳ ಕೆನ್ನೆ ಹಾಗೂ ಕತ್ತಿಗೆ, ಶಿವಮ್ಮ ಅವರ ಬೆನ್ನಿನ ಭಾಗಕ್ಕೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮೀಪದ ಕೂಡೂರು ಗ್ರಾಮದ ಸರ್ಕಾರಿ ಪ್ರಾಥಮಿಕ . ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಿಂದ ತಿಳಿದುಬಂದಿದೆ.







