



ಬಂಟ್ವಾಳ: ಬಸ್ಸು ತಂಗುದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯೋರ್ವಳ ಮೇಲೆ ಭಗ್ನ ಪ್ರೇಮಿಯೊಬ್ಬ ಕತ್ತಿಯಿಂದ ಮನಬಂದಂತೆ ಕಡಿದು ಕೊಲೆಗೆ ಯತ್ನಿಸಿ ಪರಾರಿಯಾದ ಅತ್ಯಂತ ಭೀಕರ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಚಿ ಮೋಂತಿಮಾರು ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ದಾಳಿಯಿಂದಾಗಿ ತೀವ್ರ ರಕ್ತಸ್ರಾವಗೊಂಡು ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ವಿದ್ಯಾರ್ಥಿನಿಯನ್ನು ತಕ್ಷಣವೇ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಸಾಗಿಸಿ, ತೀವ್ರನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇರಾ ಗ್ರಾಮದ ಮೋಂತಿಮಾರು ಪಡ್ಪು ಒಂದು ಕೈ ಅದ್ರಾಮ ಎಂಬಾತನ ಪುತ್ರ ಜನ್ಸಾರ್ (28) ಎಂಬಾತನೇ ಅಪ್ರಾಪ್ತ ಬಾಲಕಿಯ ಮೇಲೆ ಕೊಲೆ ಯತ್ನ ನಡೆಸಿದ ಕ್ರೂರಿ. ಈತ ಮೋಂತಿಮಾರು ಬಸ್ ತಂಗುದಾಣದ ಬಳಿಯೇ ಗೂಡಂಗಡಿಯೊಂದನ್ನು ಇಟ್ಟುಕೊಂಡಿದ್ದ ಎನ್ನಲಾಗಿದೆ.
ಇಂದು ಬೆಳಿಗ್ಗೆ ಎಂದಿನಂತೆ ವಿದ್ಯಾರ್ಥಿನಿ ಬಸ್ ತಂಗುದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಜನ್ಸಾರ್, ಏಕಾಏಕಿ ಲಾಂಗ್/ಕತ್ತಿಯಿಂದ ಮಾರಣಾಂತಿಕ ದಾಳಿ ನಡೆಸಿದ್ದಾನೆ. ಜನ್ಸಾರ್ ಬಾಲಕಿಯ ತಲೆಗೆ ಕಡಿಯಲು ಮುಂದಾಗುತ್ತಿದ್ದಂತೆ, ಅಪಾಯವನ್ನರಿತ ಬಾಲಕಿ ತನ್ನ ಕೈಯಿಂದ ತಡೆಯಲು ಯತ್ನಿಸಿದ್ದಾಳೆ. ಈ ವೇಳೆ ಬಾಲಕಿಯ ಕೈಯ ಎರಡು ಬೆರಳುಗಳು ಕತ್ತರಿಸಿ ಕೆಳಗೆ ಬಿದ್ದಿವೆ. ದಾಳಿಯ ತೀವ್ರತೆಗೆ ರಕ್ತಸ್ರಾವವಾಗಿ ಬಾಲಕಿ ನೆಲಕ್ಕೆ ಕುಸಿದು ಬಿದ್ದರೂ ಬಿಡದ ಕಾಮುಕ, ಆಕೆಯ ಕಾಲು ಮತ್ತು ಕೈ ಭಾಗಗಳಿಗೆ ಮನಬಂದಂತೆ ಕಡಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ನಡೆದ ಮಂಚಿ ಮೋಂತಿಮಾರು ಬಸ್ಸು ತಂಗುದಾಣದ ಗೋಡೆ, ನೆಲದ ತುಂಬಾ ರಕ್ತದ ಓಕುಳಿಯೇ ಹರಿದಿದ್ದು, ದಾಳಿಯ ಭೀಕರತೆಗೆ ಸಾಕ್ಷಿಯಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ತಕ್ಷಣವೇ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನಾ ಸ್ಥಳವನ್ನು ಸಾರ್ವಜನಿಕರು ಪ್ರವೇಶಿಸದಂತೆ ಬ್ಯಾರಿಕೇಡ್ ಹಾಗೂ ಪೊಲೀಸ್ ಟೇಪ್ ಹಾಕಿ ಬಂದೋಬಸ್ತ್ ಮಾಡಲಾಗಿದ್ದು, ಪರಾರಿಯಾದ ಆರೋಪಿ ಜನ್ಸಾರ್ ಪತ್ತೆಗಾಗಿ ಪೊಲೀಸರು ತೀವ್ರು ಜಾಲ ಬೀಸಿದ್ದಾರೆ.
ಹಾಡ ಹಗಲೇ ವಿದ್ಯಾರ್ಥಿನಿಯ ಮೇಲೆ ನಡೆದ ಈ ಭೀಕರ ಘಟನೆಯಿಂದಾಗಿ ಗ್ರಾಮದಾದ್ಯಂತ ತೀವ ಆತಂಕ ಹಾಗೂ ಆಕ್ರೋಶದ ವಾತಾವರಣ ಸೃಷ್ಟಿಯಾಗಿದೆ. ಕೃತ್ಯ ಎಸಗಿ ಪರಾರಿಯಾಗಿರುವ ನರರಾಕ್ಷಸ ಜವ್ವಾರ್ನನ್ನು ಪೊಲೀಸರು ತಕ್ಷಣವೇ ಬಂಧಿಸಿ, ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸ್ಥಳೀಯ ಸಾರ್ವಜನಿಕರು ಹಾಗೂ ಸಂಘಟನೆಗಳು ತೀವ್ರವಾಗಿ ಒತ್ತಾಯಿಸಿವೆ ಎಂದು ತಿಳಿದು ಬಂದಿದೆ.








