
ಸಾಲೆತ್ತೂರು: ಬಂಟರ ಸಂಘ ಸಾಲೆತ್ತೂರು ವಲಯದ ವತಿಯಿಂದ ಬಂಟರ ಕ್ರೀಡೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆ.16ರಂದು ನಡೆಯಲಿದೆ.
ಸಾಲೆತ್ತೂರು, ಕೊಳ್ಳಾಡು ಹಾಗೂ ವಿಟ್ಲ ಪಡೂರು ಗ್ರಾಮಗಳ ವ್ಯಾಪ್ತಿಯ ಬಂಟರ ಸಂಘದ ಆಶ್ರಯದಲ್ಲಿ ಶ್ರೀ ಮಲರಾಯಿ ಮೂವರ್ ದೈವಂಗಳ ದೈವಸ್ಥಾನ ಕಾಪುಮಜಲು ಗದ್ದೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಿಗ್ಗೆ 9 ಗಂಟೆಗೆ ಕ್ರೀಡೋತ್ಸವಕ್ಕೆ ಶ್ರೀ ಸುಬ್ಬಣ್ಣ ನ್ಯಾಕ್ ಅಗರಿ ಚಾಲನೆ ನೀಡಲಿದ್ದು, ಬಳಿಕ ವಿವಿಧ ವಯೋಮಾನದವರಿಗೆ ಓಟ, ಶಾಟ್ಪುಟ್, ರಿಲೇ ಸೇರಿದಂತೆ ಹಲವು ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳು ನಡೆಯಲಿವೆ.
ಪುರುಷರಿಗಾಗಿ ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಮಹಿಳೆಯರಿಗಾಗಿ ಕಬಡ್ಡಿ, ತ್ರೋಬಾಲ್, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ದಂಪತಿಗಳಿಗಾಗಿ ಹಾಳೆ ಓಟ, ಬಲೂನ್ ಸ್ಪರ್ಧೆ ಹಾಗೂ ಪುರುಷರು ಮತ್ತು ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಸೇರಿದಂತೆ ಮನೋರಂಜನಾ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ.ಬೆಳಿಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಲಿದ್ದು, ಸಾಲೆತ್ತೂರು ವಲಯ ಬಂಟರ ಸಂಘದ ಅಧ್ಯಕ್ಷ ಉದಯ ಕುಮಾರ್ ರೈ ಅಗರಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಹಿರಿಯ ಕಂಬಳ ಓಟಗಾರ ಚಂದ್ರಹಾಸ ರೈ ಬದಿಯಡ್ಕ ಅವರನ್ನು ಸನ್ಮಾನಿಸಲಾಗುವುದು.
ಅಲ್ಲದೆ, ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.








