
ಮಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ಶಾಲಾ ಮಕ್ಕಳ ಬಸ್ ಸುರಕ್ಷತೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಸೆ.2ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಯಿತು.

ಸದರಿ ಕಾರ್ಯಕ್ರಮದಲ್ಲಿ ಮಂಗಳೂರು ನಗರದ ವಿವಿಧ ಶಾಲೆಗಳ ಶಾಲಾ ಬಸ್ ಚಾಲಕರು, ಮಾಲಿಕರು, ಬಸ್ ಮ್ಯಾನೇಜರ್ಗಳು ಹಾಗೂ ಶಾಲಾ ಆಡಳಿತ ಮಂಡಳಿಯ ಸುಮಾರು 600 ಮಂದಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ನಿಟ್ಟಿನಲ್ಲಿ ಮುಖ್ಯವಾಗಿ ಶಾಲಾ ಬಸ್ ಚಾಲಕರು ಹಾಗೂ ನಿರ್ವಾಹಕರು ಪಾಲಿಸಬೇಕಾದ ಕಾನೂನು ನಿಯಮಗಳು, ರಸ್ತೆ ಸುರಕ್ಷತಾ ಕ್ರಮಗಳು, ಸಂಚಾರ ನಿಯಮಗಳು ಹಾಗೂ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಜವಾಬ್ದಾರಿಗಳ ಕುರಿತು ಸಮಗ್ರವಾಗಿ ತಿಳುವಳಿಕೆ ನೀಡಲಾಯಿತು.
ಅದೇ ರೀತಿ, ಶಾಲಾ ಆಡಳಿತ ಮಂಡಳಿಯವರು ಶಾಲಾ ವಾಹನಗಳ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಚಾಲಕರು ಹಾಗೂ ನಿರ್ವಾಹಕರ ಕರ್ತವ್ಯಗಳನ್ನು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಶಾಲಾ ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಯಿತು. ಅಲ್ಲದೇ, ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಶಾಲಾ ಬಸ್ ಚಾಲಕರ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಲಾಯಿತು. ಕಾರ್ಯಕ್ರಮದ ಸಂದರ್ಭದಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆಯ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಡಿ.ಸಿ.ಪಿ. (ಅಪರಾಧ ಮತ್ತು ಸಂಚಾರ)ರವರು ಮಾತನಾಡಿ Karnataka Motor Vehicles (Condition for Vehicle engaged in transport of school Children ) Rule 2012 ರಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಶಾಲಾ /ಕಾಲೇಜು school cab safety committee ಯು ವಾಹನ ಮತ್ತು ಚಾಲಕರ ನೈಜ್ಯ ದಾಖಲೆಗಳು, ಫಿಟ್ನೆಸ್, ವಿಮೆ, ಅಗ್ನಿಶಾಮಕ ಉಪಕರಣ, ಸ್ಪೀಡ್ ಗವರ್ನರ್ ಹಾಗೂ Closed Body ಹೊಂದಿರುವಂತೆ, ಶಾಲಾ ವಾಹನದ ಗರಿಷ್ಠ ವೇಗ 40 ಕಿ.ಮೀ./ಗಂ. ಸಂಚರಿಸುವಂತೆ ಸೂಚನೆಯನ್ನು ನೀಡಿದ್ದರು. ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿರವರು ಮಾತನಾಡಿ ಪರ್ಮಿಟ್ ಹೊಂದಿರುವ ವಾಹನಗಳು ಮಾತ್ರ ಮಕ್ಕಳನ್ನು ಸಾಗಿಸುವುದು ಮತ್ತು ಇತರೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸೂಚಿಸಿರುತ್ತಾರೆ.
ಶಿಕ್ಷಣಾಧಿಕಾರಿಯವರು ಶಾಲಾ ಆಡಳಿತ ಮಂಡಳಿಯವರಿಗೆ ಶಾಲಾ ಮಕ್ಕಳ ಸುರಕ್ಷತೆಯ ಬಗ್ಗೆ ಆಗಾಗ ಶಿಕ್ಷಕರು ಶಾಲಾ ಬಸ್ಸು ಮಾಲಕರು/ಚಾಲಕರು, ಪೋಷಕರ ಸಭೆ ನಡೆಸಿ ಸುರಕ್ಷತೆಯ ಬಗ್ಗೆ ಚರ್ಚಿಸಿ ಕ್ರಮಗಳನ್ನು ಕೈಗೊಳ್ಳಲು ತಿಳಿಸಿರುತ್ತಾರೆ. ಎ.ಸಿ.ಪಿ. ಸಂಚಾರ ಉಪವಿಭಾಗ ರವರು ಚಾಲಕರು ಸಂಚಾರ ನಿಯಮವನ್ನು ಪಾಲಿಸುವುದಲ್ಲದೇ ಶಿಸ್ತು ಮತ್ತು ಜವಾಬ್ದಾರಿಯಿಂದ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲು ತಿಳಿಸಿರುತ್ತಾರೆ.
ಕಾರ್ಯಕ್ರಮದಲ್ಲಿ ಮಂಗಳೂರು ನಗರ ಸಂಚಾರ ಪೊಲೀಸ್ ಠಾಣೆಗಳ ಎಲ್ಲಾ ಠಾಣಾಧಿಕಾರಿಗಳು, ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.








