
ಸುಳ್ಯ, ಸೆ. 3: ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಸುಳ್ಯ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ.
ಸುಳ್ಯ ಪೊಲೀಸ್ ಠಾಣಾ ಅ.ಕ್ರ. 138/2022, ಕಲಂ 302, 316 ಐಪಿಸಿ ಪ್ರಕರಣ ಹಾಗೂ ಮಾನ್ಯ ಪುತ್ತೂರು ನ್ಯಾಯಾಲಯದ ಎಸ್ಸಿ ನಂ. 5024/2023ರ ವಾರಂಟ್ ಆರೋಪಿಯಾಗಿದ್ದ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಶ್ರೀಮಾಯಾಪುರ ಅಂಚೆ ವ್ಯಾಪ್ತಿಯ ಬಾಮನ್ ಪುಕೂರ್ ಗ್ರಾಮದ ಇಮ್ರಾನ್ ಶೇಖ್ ಬಂಧಿತ ಆರೋಪಿ.ಆರೋಪಿ ಮಾನ್ಯ ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ಬಳಿಕ ಸುಮಾರು ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಈ ಹಿನ್ನೆಲೆಯಲ್ಲಿ ಆರೋಪಿಯ ಪತ್ತೆಗೆ ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯಕ ಹಾಗೂ ಸುಳ್ಯ ಠಾಣಾ ಪಿಎಸ್ಐ ಉದಯ ರವಿ ಎಂ. ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಸೆ. 1ರಂದು ಸುಳ್ಯ ಠಾಣೆಯ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೆಬಲ್ 368 ರಾಜು ನಾಯ್ಕ ಡಿ., ಪೊಲೀಸ್ ಕಾನ್ಸ್ಟೆಬಲ್ 2283 ಶ್ರೀಶೈಲ ಎಂ.ಕೆ. ಹಾಗೂ ಪಿಸಿ 1020 ಸೋಮಯ್ಯ ಹಿರೇಮಠ ಅವರು ಪಶ್ಚಿಮ ಬಂಗಾಳದ 24 ನಾರ್ತ್ ಪರಗಣಾಸ್ ಜಿಲ್ಲೆಯ ಹಾದಿಪುರ ಗ್ರಾಮದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಿದ್ದಾರೆ.ಬಂಧಿತ ಆರೋಪಿಯನ್ನು ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.








