
ಕೌಶಂಬಿ: ಕರ್ತವ್ಯದಲ್ಲಿದ್ದ ವೇಳೆ ತನ್ನದೇ ಸೇವಾ ರೈಫಲ್ನಿಂದ ಸಿಡಿದ ಗುಂಡು ತಗುಲಿ ಮಹಿಳಾ ಕಾನ್ಸ್ಟೇಬಲ್ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಗಾಜಿಪುರ ಜಿಲ್ಲೆಯ 25 ವರ್ಷದ ಪ್ರಿಯಾಂಕಾ ಯಾದವ್ ಎಂದು ಗುರುತಿಸಲಾಗಿದೆ. 2025ರ ಬ್ಯಾಚ್ನ ಕಾನ್ಸ್ಟೇಬಲ್ ಆಗಿದ್ದ ಅವರು ಮಂಜನ್ಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಂಗಳವಾರ ಬೆಳಗ್ಗೆ ಮಹಿಳಾ ಠಾಣೆಯಲ್ಲಿ ಕಾವಲು ಕರ್ತವ್ಯದಲ್ಲಿದ್ದ ವೇಳೆ ರೈಫಲ್ನಿಂದ ಗುಂಡು ಸಿಡಿದು ಪ್ರಿಯಾಂಕಾ ಅವರಿಗೆ ತಗುಲಿದೆ. ತಕ್ಷಣ ಸಹೋದ್ಯೋಗಿಗಳು ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಅಧೀಕ್ಷಕ ಸತ್ಯನಾರಾಯಣ ಪ್ರಜಾಪತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮಿತ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಘಟನಾ ಸ್ಥಳವನ್ನು ಪರಿಶೀಲಿಸಿದರು.ಘಟನೆಗೆ ಸಂಬಂಧಿಸಿದಂತೆ ಮಂಜನ್ಪುರ ಸರ್ಕಲ್ ಅಧಿಕಾರಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದೆ. ತಂಡವು ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದರ ಜೊತೆಗೆ, ಘಟನೆಗೆ ಸಾಕ್ಷಿಯಾದವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ.
ತನಿಖೆ ಪೂರ್ಣಗೊಂಡ ಬಳಿಕವೇ ಗುಂಡು ಹೇಗೆ ಸಿಡಿಯಿತು ಹಾಗೂ ಸಾವಿಗೆ ನಿಖರ ಕಾರಣವೇನು ಎಂಬುದು ಸ್ಪಷ್ಟವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.








