ಬೆಂಗಳೂರು: ಕೊರೊನಾ 2ನೇ ಅಲೆಯ ಆತಂಕ ಎದುರಾಗಿದ್ದು, ರಾಜ್ಯ ಸರ್ಕಾರದಿಂದ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಸಭೆ, ಸಮಾರಂಭಗಳಿಗೆ ಕಠಿಣ ನಿಯಮ ಜಾರಿ ಮಾಡಲಾಗಿದ್ದು, ಹೆಚ್ಚು ಜನ ಸೇರುವುದನ್ನು ನಿರ್ಬಂಧಿಸಲಾಗಿದೆ.
ಈ ಬಗ್ಗೆ ಸರ್ಕಾರದ ಮಟ್ಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಸಭೆ, ಸಮಾರಂಭಗಳಿಗೆ ಜನ ಸೇರಲು ಷರತ್ತು ವಿಧಿಸಲಾಗಿದೆ.
ಹಾಲ್ನಲ್ಲಿ ಮದುವೆ ಸಮಾರಂಭಗಳಿಗೆ 200 ಜನ ಮಾತ್ರ ಸೇರಬೇಕು. ತೆರೆದ ಜಾಗದಲ್ಲಿ ಮದುವೆ ಸಮಾರಂಭ ನಡೆದರೆ 500 ಜನರು ಮಾತ್ರ ಸೇರಬೇಕು ಎಂಬ ನಿರ್ಬಂಧವನ್ನು ವಿಧಿಸಲಾಗಿದೆ.
ಜನ್ಮದಿನ ಸೇರಿದಂತೆ ಇತರೆ ಆಚರಣೆಗಳಿಗೆ ನಿಯಮ ರೂಪಿಸಲಾಗಿದ್ದು, ತೆರೆದ ಪ್ರದೇಶದಲ್ಲಿ ಜನ್ಮ ದಿನಾಚರಣೆ ಆಚರಿಸುವುದಾದರೆ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಲ್ ಅಥವಾ ಒಳಗಡೆ ಆಚರಿಸುವುದಾದರೆ ಕೇವಲ 50 ಜನರು ಭಾಗವಹಿಸಬಹುದಾಗಿದೆ.
ನಿಧನ, ಶವಸಂಸ್ಕಾರಕ್ಕೆ ತೆರೆದ ಪ್ರದೇಶದಲ್ಲಿ 100 ಜನ ಮೀರದಂತೆ, ಸಭಾಂಗಣದಲ್ಲಾದರೆ 50 ಜನರ ಮೀರದಂತೆ ಕಾರ್ಯ ನಡೆಸಬೇಕು. ಅಂತ್ಯಕ್ರಿಯಯಲ್ಲಿ 50 ಜನ ಮೀರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇತರೆ ಸಮಾರಂಭಗಳಲ್ಲಿ ಕೂಡಾ 100 ಜನ ಮೀರಬಾರದು, ಧಾರ್ಮಿಕ ಆಚರಣೆಗಳಲ್ಲಿ 500, ರಾಜಕೀಯ ಕಾರ್ಯಕ್ರಮಗಳಲ್ಲಿ 500 ಜನ ಮೀರಬಾರದೆಂದು ತಿಳಿಸಲಾಗಿದೆ.
ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಸೋಂಕಿತರ ಪತ್ತೆಹಚ್ಚುವ ಕಾರ್ಯವನ್ನು ಸಹ ಚುರುಕುಗೊಳಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಟೆಸ್ಟಿಂಗ್ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.