ಮಂಗಳೂರು: ತಾಯಿ ಮೃತಪಟ್ಟಾಗಲೂ ವೃತ್ತಿಬದ್ಧತೆಗೆ ಆದ್ಯತೆ ನೀಡಿದ ನಂದಿಗುಡ್ಡದ ಹಿಂದೂ ಸ್ಮಶಾನದ ಉಸ್ತುವಾರಿ ಸುದೇಶ್ ಪೂಜಾರಿ ಅವರ ಕರ್ತವ್ಯ ಪ್ರಜ್ಞೆಗೆ ಪ್ರಶಂಸೆ ವ್ಯಕ್ತವಾಗಿದೆ.

ತಾಯಿ ಪಾರ್ವತಿ ಪೂಜಾರಿ (66) ಮೇ 8ರಂದು ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಮಧ್ಯಾಹ್ನ 12.45ರ ಸುಮಾರಿಗೆ ಸುದೇಶ ಅವರಿಗೆ ಅಕ್ಕನಿಂದ ತಲುಪಿತು. ಆ ಹೊತ್ತಿಗೆ ಸ್ಮಶಾನದಲ್ಲಿದ್ದ ಅವರು, ಅಲ್ಲಿಗೆ ಅಂತ್ಯಸAಸ್ಕಾರಕ್ಕೆ ಬಂದವರಿಗೆ ವಿಳಂಬ ಆಗಬಾರದೆಂಬ ಕಾರಣಕ್ಕೆ ಅಲ್ಲಿನ ಎಲ್ಲ ಕೆಲಸಗಳನ್ನು ಮುಗಿಸಿ ಮನೆಗೆ ತೆರಳಿದರು. ಅಷ್ಟೊತ್ತಿಗೆ ಮಧ್ಯಾಹ್ನ 3.30 ದಾಟಿತ್ತು. ತಾಯಿಯ ಎಲ್ಲ ಅಂತಿಮ ವಿಧಿಗಳನ್ನು ನೆರವೇರಿಸಿದ ಅವರು ಪುನಃ ಸ್ಮಶಾನಕ್ಕೆ ತೆರಳಿ, ಕರ್ತವ್ಯ ನಿರ್ವಹಿಸಿದರು.

‘ಕೋವಿಡ್ ಹಾಗೂ ಕೋವಿಡ್ಯೇತರ ರೋಗಿಗಳ ಸಾವು ಹೆಚ್ಚುತ್ತಿದೆ. ಸ್ಮಶಾನಕ್ಕೆ ಮೃತದೇಹಗಳನ್ನು ತರುವವರು ದುಃಖದಲ್ಲಿರುತ್ತಾರೆ. ಅವರು ಅಂತ್ಯಸAಸ್ಕಾರಕ್ಕಾಗಿ ಕಾಯುವಂತಾಗಬಾರದು. ಹೀಗಾಗಿ, ನಾನು ಕರ್ತವ್ಯಕ್ಕೆ ಪ್ರಥಮ ಪ್ರಾಶಸ್ತ್ಯ ಕೊಡುತ್ತೇನೆ. ಬೆಳಿಗ್ಗೆ 4.30 ಸುಮಾರಿಗೆ ಸ್ಮಶಾನಕ್ಕೆ ಬಂದು ಅಲ್ಲಿನ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತೇನೆ. ಕೆಲವೊಮ್ಮೆ ದಾಖಲಾತಿ ಕೆಲಸಗಳನ್ನೆಲ್ಲ ಮುಗಿಸಿ ಮನೆಗೆ ತೆರಳುವಾಗ ರಾತ್ರಿ 12.30 ಆಗುತ್ತದೆ’ ಎಂದು ಸುದೇಶ್ ಹೇಳಿದರು.

‘ನನ್ನ ಅಜ್ಜ ಇಲ್ಲಿ ಕೆಲಸ ಮಾಡಿದವರು. ನಂತರ ತಂದೆ ಇಲ್ಲಿಯೇ ಕೆಲಸ ಮಾಡುತ್ತಿದ್ದರು. ಎಂಟು ವರ್ಷಗಳ ಹಿಂದೆ ಅವರು ತೀರಿಹೋದ ಮೇಲೆ ನಾನು ಈ ಹೊಣೆಗಾರಿಕೆ ನಿರ್ವಹಿಸುತ್ತಿದ್ದೇನೆ. ನಮ್ಮ ಕೆಲಸಕ್ಕೆ ಯಾವತ್ತೂ ರಜೆ ಇಲ್ಲ. ಕೆಲಸ ಕಡಿಮೆ ಇದ್ದಾಗ ಮಾತ್ರ ವಿರಾಮವಾಗಿತ್ತು. ಈಗ ತಿಂಗಳುಗಳಿAದ ಅದಕ್ಕೂ ಅವಕಾಶ ಸಿಗುತ್ತಿಲ್ಲ. ತಂದೆ ಮಾಡಿದ ಪವಿತ್ರ ಸೇವಾ ಕಾರ್ಯವನ್ನು ಮುಂದುವರಿಸಿಕೊAಡು ಹೋಗುತ್ತಿರುವ ಸಮಾಧಾನವಿದೆ. ಕಲಿತ ವಿದ್ಯೆಗೆ ಉತ್ತಮ ಸಂಬಳ ಸಿಗಬಹುದು. ಆದರೆ, ಮನಸ್ಸಿಗೆ ನೆಮ್ಮದಿ ನೀಡು ಕಾರ್ಯ ನಿಭಾಯಿಸುತ್ತಿರುವ ತೃಪ್ತಿ ಇದೆ’ ಎಂದು ಡಿಪ್ಲೊಮಾ ಓದಿರುವ ಸುದೇಶ್ ಅಭಿಪ್ರಾಯ ಹಂಚಿಕೊ0ಡರು.










