ಬಂಟ್ವಾಳ: ತಾಲೂಕಿನ ಪ್ರತಿಯೊಬ್ಬ ಅಧಿಕಾರಿಗಳು ಕೊರೊನಾ ಸೊಂಕಿನ ಕೊಂಡಿ ತುಂಡು ಮಾಡಲು ಸರಕಾರದ ನಿಯಮಾನುಸಾರ ಪ್ರಯತ್ನ ಮಾಡಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.


ತಾಲೂಕಿನಲ್ಲಿ ಕೋವಿಡ್ ನಿಯಂತ್ರಣ ಸಾಧಿಸಲು ಗ್ರಾ.ಪಂ.ಗಳು ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬ ವಿಚಾರ ಕುರಿತಾಗಿ ಪಿ.ಡಿ.ಒ.ಗಳಿಂದ ಮಾಹಿತಿ ಪಡೆಯುವ ಸಲುವಾಗಿ ತಾ.ಪಂ.ಇ.ಒ.ರಾಜಣ್ಣ ಕರೆದ ಸಭೆಯಲ್ಲಿ ಮಾತನಾಡಿದರು. ಬಂಟ್ವಾಳ ತಾಲೂಕಿನಲ್ಲಿ ನಿನ್ನೆವರೆಗೆ 963 ಕೊರೊನಾ ಸೊಂಕಿತ ಪ್ರಕರಣಗಳು ಇದ್ದು ಅದರಲ್ಲಿ 877 ಮಂದಿ ಹೋಮ್ ಐಸೋಲೇಶನ್, 85 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈವರಗೆ ತಾಲೂಕಿನಲ್ಲಿ ಕೊರೊನಾ ಸೊಂಕಿನಿಂದ 53 ಮಂದಿ ಸಾವನ್ನಪ್ಪಿದ ಬಗ್ಗೆ ಆರೋಗ್ಯ ಇಲಾಖಾ ಮಾಹಿತಿ ನೀಡಿದೆ ಎಂದು ಶಾಸಕರು ತಿಳಿಸಿದರು.

ಪ್ರಸ್ತುತ ಸಕ್ರಿಯವಾಗಿರುವ ಕೊರೊನಾ ಸೊಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಜಾಸ್ತಿಯಾಗದಂತೆ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಅಧಿಕಾರಿಗಳು ಜತೆಯಾಗಿ ಕೆಲಸ ಮಾಡಿ ಕೊರೊನಾ ಮುಕ್ತ ತಾಲೂಕು ಮಾಡಲು ಶ್ರಮಪಡಬೇಕು ಎಂದರು. ಬಂಟ್ವಾಳ ತಾಲೂಕಿನ ಪಿ.ಡಿ.ಒ.ಗಳ ಹಾಗೂ ಎಲ್ಲಾ ಅಧಿಕಾರಿಗಳ ಸಂಘಟಿತವಾದ ಉತ್ತಮ ರೀತಿಯ ಕಾರ್ಯವೈಖರಿಯ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂಬುದು ಸಂತೋಷ ಇದೆ. ಪ್ರತಿಯೊಬ್ಬರೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದೀರಿ , ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಕೆಲಸ ನಿರ್ವಹಿಸಿ ಎಂದು ಅವರು ಹೇಳಿದರು. ವ್ಯಾಕ್ಸಿನೇಷನ್ ಬಂದ ಕೂಡಲೇ ಗ್ರಾಮದ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಅಯಾಯ ಗ್ರಾಮಗಳಲ್ಲಿ ಪಿ.ಡಿ.ಒ.ಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಸೊಂಕಿತರ ಗಂಟಲು ದ್ರವ ಪರೀಕ್ಷೆ ನಡೆಸಿ ಕೂಡಲೇ ಪರೀಕ್ಷಾ ವರದಿ ಬರುತ್ತಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಮಸ್ಯೆಯ ಬಗ್ಗೆ ಅರೋಗ್ಯ ಇಲಾಖೆಯ ಅಧಿಕಾರಿಗಳಲ್ಲಿ ಕಾರಣ ಕೇಳಿ ಪ್ರತಿ ದಿನದ ಪರೀಕ್ಷಾ ವರದಿಗಳನ್ನು ನೀಡುವಂತೆ ತಿಳಿಸಿದರು. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಗ್ರಾಮಗಳಲ್ಲಿ
ಪ್ರಾಥಮಿಕ ಸೊಂಕಿತರ ಮಾಹಿತಿ ಪಡೆದುಕೊಂಡು ಕೊರೊನಾ ಸೊಂಕು ಹೆಚ್ಚಾಗದಂತೆ ಟಾಸ್ಕ್ ಫೋರ್ಸ್ ಹಾಗೂ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿ ಎಂದರು. ಸಭೆಗೆ ಸರಿಯಾದ ಸಮಯಕ್ಕೆ ಬರದೆ ಸಮಯ ಪಾಲನೆ ಮಾಡದ ಪಿ.ಡಿ.ಒಗಳ ಮೇಲೆ ಗರಂ ಆದ ಶಾಸಕರು ಇ.ಒ.ಕರೆದ ಸಭೆಗೆ ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಅಂದರೆ ಏನರ್ಥ ಇ.ಒ.ಅವರ ಹಿಡಿತದಲ್ಲಿ ಪಿ.ಡಿ.ಒ.ಗಳು ಇಲ್ಲ ಎಂಬುದು ಸಾಬೀತಾಗಿದೆ. ಈ ಬಗ್ಗೆ ಸಿ.ಎಸ್.ಗೆ ದೂರು ನೀಡುತ್ತೇನೆ ಎಂದು ಅವರು ಮದುವೆ ಮನೆಗೆ ಬರುವ ರೀತಿಯಲ್ಲಿ ಮೀಟಿಂಗ್ ಗೆ ಬರುವುದು ಸರಿಯಾದ ಕ್ರಮ ಅಲ್ಲ ಎಂದರು. ಮೀಟಿಂಗ್ ಗೆ ತಡವಾಗಿ ಬಂದ ಪಿ.ಡಿ.ಒ.ಗಳನ್ನು ತಾ.ಪಂ.ಇ.ಒ.ರಾಜಣ್ಣ ಶಾಸಕರ ಎದುರಿನಲ್ಲಿಯೇ ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆಯಿತು.

ಪ್ರಸ್ತುತ ತಾಲೂಕಿನ ಗ್ರಾ.ಪಂ.ಗಳಲ್ಲಿ ಸಕ್ರಿಯ ಇರುವ ಕೊರೊನಾ ಸೊಂಕಿತರ ಬಗ್ಗೆ ಪಿ.ಡಿ.ಒ.ಗಳು ನೀಡಿದ ಮಾಹಿತಿ:ಅಮ್ಟಾಡಿ 40, ಅನಂತಾಡಿ 8, ಬಡಗಬೆಳ್ಳೂರು 11, ಬಡಗಕಜೆಕಾರು 8, ಬಾಳೆಪುಣಿ 35, ಬಾಳ್ತಿಲ 45, ಚನ್ನೈತ್ತೋಡಿ 79, ಗೋಳ್ತಮಜಲು 23, ಇಡ್ಕಿದು 6, ಇರಾ 27, ಕಡೇಶಿವಾಲಯ 6, ಕನ್ಯಾನ 18, ಕರಿಯಂಗಳ9, ಅಮ್ಮುಂಜೆ ಕರೋಪಾಡಿ 32, ಕಾವಳಮೂಡೂರು 6, ಕಾವಳಪಡೂರು 16, ಕೆದಿಲ 12, ಕೇಪು 23, ಕೊಳ್ನಾಡು 5, ಕುಕ್ಕಿಪಾಡಿ 17, ಕುರ್ನಾಡು 9, ಮಂಚಿ 21, ಮಾಣಿ 4, ಮೇರೆಮಜಲು 29, ನರಿಕೊಂಬು 24, ನರಿಂಗಾಣ 15, ನಾವೂರ 28, ಪಜೀರು 11, ಪಂಜಿಕಲ್ಲು 16, ಪೆರ್ನೆ 8, ಪೆರುವಾಯಿ 8, ಪಿಲಾತಬೆಟ್ಟು 3, ಪುದು 15, ಪುಣಚ 23, ರಾಯಿ 11, ಸಜೀಪ ಮೂಡ 12, ಸಜೀಪ ಮುನ್ನೂರು 8, ಸಜೀಪ ನಡು 10, ಸಂಗಬೆಟ್ಟು 12, ತುಂಬೆ 33, ಉಳಿ 15, ವೀರಕಂಬ 12, ಮಣಿನಾಲ್ಕೂರು 10, ಇರ್ವತ್ತೂರು 9, ಅಮ್ಮುಂಜೆ 12, ಮಾಣಿಲ 8, ಬರಿಮಾರು 8, ಬೊಳಂತೂರು 9, ಅರಳ 12, ನೆಟ್ಲ ಮೂಡ್ನೂರು 12, ಸಾಲೆತ್ತೂರು 2, ಕಳ್ಳಿಗೆ 27, ಪೆರಾಜೆ 3, ಸಜೀಪ ಪಡು 4, ಸಕ್ರೀಯ ಕೊರೊನಾ ಸೊಂಕು ಪ್ರಕರಣಗಳು ಸೋಮವಾರದವರೆಗೆ ಇದೆ ಎಂಬ ಮಾಹಿತಿ ನೀಡಿದರು.

ಅತೀ ಹೆಚ್ಚು ಪ್ರಕರಣಗಳಿದ್ದ ಪುಣಚ ಗ್ರಾಮದಲ್ಲಿ ವಾರದಲ್ಲಿ ಮೂರು ದಿನ ಸಂಪೂರ್ಣ ಲಾಕ್ ಡೌನ್ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ಪ್ರಸ್ತುತ ಕೊರೊನಾ ಸೊಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ ಎಂಬ ವಿಚಾರ ಸಭೆಯಲ್ಲಿ ಪಿ.ಡಿ.ಒ ಗಮನಕ್ಕೆ ತಂದರು. ಪ್ರಭಾರ ತಾಲೂಕು ಆರೋಗ್ಯ ಅಧಿಕಾರಿ ಜಯಪ್ರಕಾಶ್ ಉಪಸ್ಥಿತರಿದ್ದರು.


