ಧಾರವಾಡ: ಮದ್ಯಪಾನ ಮಾಡಲು ಹಣಕ್ಕಾಗಿ ಪೀಡಿಸುತ್ತಿದ್ದ ಮಗನ ಕಾಟ ತಡೆಯಲಾರದೇ ತಂದೆಯೇ ಆತನನ್ನು ಹೊಡೆದು ಕೊಂದ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ನಗರದ ತೆಲುಗರ ಓಣಿಯಲ್ಲಿ ಘಟನೆ ನಡೆದಿದ್ದು ಕುಡಿತದ ಚಟ ಅಂಟಿಸಿಕೊಂಡಿದ್ದ ಬಸವರಾಜ ಹಿರೇಕುಂಬಿ(36) ಹತ್ಯೆಯಾದ ವ್ಯಕ್ತಿ.

ಈತ ತನ್ನ ತಂದೆಯ ಬಳಿ ಮದ್ಯ ಸೇವಿಸಲೆಂದು ಪದೇ ಪದೇ ಹಣ ಕೇಳುತ್ತಿದ್ದ ಎನ್ನಲಾಗಿದ್ದು, ಅದೇ ವಿಚಾರಕ್ಕಾಗಿ ಆರಂಭವಾದ ಜಗಳ ತಾರಕಕ್ಕೇರಿ ಬಳಿಕ ತಂದೆ ಫಕೀರಪ್ಪ ಮಗನ ಕಾಟ ತಾಳಲಾರದೇ ಸಿಟ್ಟಿಗೆದ್ದು ಹಾರೆಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮದ್ಯ ಸೇವನೆಗಾಗಿ ಸಾಕಷ್ಟು ಹಣ ಸುರಿಯುತ್ತಿದ್ದ ಬಸವರಾಜ ಹಿರೇಕುಂಬಿ ತನ್ನ ತಂದೆಯೊಂದಿಗೆ ಜಗಳ ತೆಗೆದಿದ್ದು ಇದೇ ಮೊದಲೇನಲ್ಲ. ನಿತ್ಯವೂ ಹಣಕ್ಕಾಗಿ ಪೀಡಿಸುತ್ತಿದ್ದ ಆತ ಮನೆಯಲ್ಲಿ ರಂಪಾಟ ಮಾಡುತ್ತಿದ್ದ. ಹಣ ಕೊಡದೇ ಇದ್ದರೆ ಕಾಡುತ್ತಿದ್ದ. ರಾತ್ರಿ ಶುರುವಾದ ಜಗಳ ಬೆಳಗಾದರೂ ಮುಗಿಯುತ್ತಿರರಲಿಲ್ಲ. ಇದನ್ನು ನೋಡಿ ರೋಸಿಹೋದ ಫಕೀರಪ್ಪ, ತಾಳ್ಮೆ ಕಳೆದುಕೊಂಡು ಮಗನ ಕೊಲೆ ಮಾಡಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.

ಹಣ ನೀಡದೇ ಇದ್ದರೆ ಮನೆ ದಾಖಲೆ ನೀಡೆಂದು ಮಗ ಪೀಡಿಸಲಾರಂಭಿಸಿದ್ದ, ಕುಡಿತಕ್ಕೆ ಆತ ಹಣ ಸುರಿಯುವುದರಿಂದ ಫಕೀರಪ್ಪ ಆತನ ಮಾತಿಗೆ ತಕರಾರು ತೆಗೆದಿದ್ದಾರೆ. ಆದರೆ, ಪಟ್ಟು ಸಡಿಲಿಸದ ಮಗ ಹಣ ಬೇಕು ಇಲ್ಲವೇ ಮನೆ ದಾಖಲೆ ಬೇಕು ಎಂದು ಬೆಳಗ್ಗಿನ ತನಕವೂ ಜಗಳ ಮಾಡಿದ್ದ. ಇದೂ ಕೂಡಾ ಕೊಲೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಧಾರವಾಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದ್ದು, ಆರೋಪಿ ತಂದೆ ಫಕೀರಪ್ಪ ಹಿರೇಕುಂಬಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ










