

ಚಾಮರಾಜನಗರ: ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಕಿನಕನಹಳ್ಳಿ ಬಳಿ ಪ್ರೇಮಿಗಳು ಸಜೀವ ದಹನವಾಗಿದ್ದಾರೆ.
ಮಾಂಬಳ್ಳಿ ಗ್ರಾಮದ ಕಾಂಚನಾ (20) ಹಾಗೂ ಶ್ರೀನಿವಾಸ್ (23) ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ದುರ್ದೈವಿಗಳಾಗಿದ್ದು, ಮಾಂಬಳ್ಳಿ-ಕಿನಕಹಳ್ಳಿ ಗ್ರಾಮದ ರಸ್ತೆಯಲ್ಲಿ ಘಟನೆ ಸಂಭವಿಸಿದೆ.

ಮಾಂಬಳ್ಳಿಯ ಕಾಂಚನಾ ಹಾಗೂ ಶ್ರೀನಿವಾಸ್ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಕಾಂಚನಾ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡುತ್ತಿದ್ದರು. ಯುವಕ ಶ್ರೀನಿವಾಸ್ ಕ್ಯಾಬ್ ಓಡಿಸಿಕೊಂಡಿದ್ದು, ಜತೆಗೆ ವ್ಯವಸಾಯವನ್ನೂ ಮಾಡುತ್ತಿದ್ದರು. ಆದರೆ, ಇಬ್ಬರೂ ಆತ್ಮಹತ್ಯೆಯ ದಾರಿ ತುಳಿಯಲು ಕಾರಣವೇನು ಎನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲಿಯ ತನಕ ಲಭ್ಯವಾಗಿಲ್ಲ.
ಯಳಂದೂರು ತಾಲ್ಲೂಕಿನ ಕಿನಕನಹಳ್ಳಿ ಸಮೀಪದ ಜಮೀನಿನ ಬಳಿ ಕಾರಿಗೆ ಬೆಂಕಿ ಹಚ್ಚಿಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












